Saturday 31 August 2013

OLYMPIAD EXAM 2013;A few words

Today as per ordeq 20students of class 6 have undergone for Olympiad exam.
As a science teacher I had prepared question papers with model OMR sheets.
I never talked to my pupils about OMR answer sheet.All has gone well.I just
gave instructions about how to fill it and they did so.
Wise students said that they liked OMR sheets as it has new way of
answering.Similarly dull students also enjoyed and gave reason why they
liked it is there is no writing of lengthy answers. Any how this exam
develops smartway of scientific thinking and competitive spirit among
students.With proper use of this we can make our students genius.Hats off
to education dept.
-Sachinkumar Hiremath


Mail sent by naveenkumarbhiremath@gmail.com

Monday 26 August 2013

ಡಿ.ಇಡಿ ಅಂದು-ಇಂದು


ಒಂದು ಕಾಲದಲ್ಲಿ ಶಿಕ್ಷಕರ ತರಬೇತಿಗೆ ಪ್ರವೇಶ ಪಡೆಯುವುದು ಪ್ರತಿಷ್ಠೆಯ ಸಂಗತಿಯಾಗಿತ್ತು. ಆದರೆ, ಇಂದು ಸುಲಭವಾಗಿ ಸೀಟು ಕೊಡುತ್ತೇವೆ ಎಂದರೂ ಪ್ರವೇಶ ಪಡೆಯ ಬಯಸುವವರ ಸಂಖ್ಯೆ ಕ್ಷೀಣಿಸುತ್ತಿದೆ.
ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿದ್ಯೆ ಜೀವನ ಪರ್ಯಂತ ಇರುತ್ತದೆ. ಹಾಗಾಗಿ `ನಿಮ್ಮ ನೆಚ್ಚಿನ ಗುರುಗಳು ಯಾರು' ಎಂದು ಕೇಳಿದರೆ ಬಹುತೇಕರ ಸ್ಮೃತಿಪಟಲದಲ್ಲಿ ತಕ್ಷಣ ಬರುವುದು ಶಿಕ್ಷಣದ ಓಂನಾಮ ಕಲಿಸಿದ ಪ್ರಾಥಮಿಕ ಶಾಲೆಯ ಗುರುಗಳೇ. ಅವರು ಶಿಲ್ಪಿಗಳು ಮೂರ್ತಿಯನ್ನು ಕೆತ್ತಿದಂತೆ, ಕಾಡು ಕಲ್ಲಿನಂತಿದ್ದ ನಮ್ಮನ್ನು ತಿದ್ದಿ, ತೀಡಿ, ಜೀವ ತುಂಬಿರುತ್ತಾರೆ. ಇಂತಹ ಗುರುಗಳನ್ನು ಸೃಷ್ಟಿಸುವುದು ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕೇಂದ್ರಗಳು.
ಭವ್ಯವಾದ ಕಟ್ಟಡಕ್ಕೆ ಅಡಿಪಾಯ ಹೇಗೆ ಭದ್ರ ಬುನಾದಿಯೋ, ಹಾಗೇ ಮಕ್ಕಳ ಭವಿಷ್ಯದ ಶಿಕ್ಷಣಕ್ಕೆ ಪ್ರಾಥಮಿಕ ಶಿಕ್ಷಣವೇ ಅಡಿಪಾಯ. ಹಾಗಾಗಿ ಒಂದು ಮಗು ಪ್ರಾಥಮಿಕ ಶಿಕ್ಷಣವನ್ನು ಹೇಗೆ ಪಡೆದಿರುತ್ತದೋ ಹಾಗೆಯೇ ಅದರ ಭವಿಷ್ಯ ನಿರ್ಧಾರವಾಗುತ್ತದೆ. ಇಂತಹ ಶಿಕ್ಷಣ ನೀಡುವ ಶಿಕ್ಷಕರನ್ನು ರೂಪಿಸುವ ತರಬೇತಿ ಕೇಂದ್ರಗಳು ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಸಾಮಾಜಿಕ ಸಂಸ್ಥೆಗಳೂ ಆಗಿರುತ್ತವೆ.
ಹಿಂದೆ ಬ್ರಿಟಿಷರು ರೂಪಿಸಿದ್ದ ಒಂದು ವರ್ಷದ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿಯು, ಸ್ವಾತಂತ್ರ್ಯಾ ನಂತರ ಟಿ.ಸಿ.ಎಚ್ ಎಂಬ ಶಿರೋನಾಮೆ ಪಡೆಯಿತು. 1992ಕ್ಕಿಂತ ಮೊದಲು ಟಿ.ಸಿ.ಎಚ್ ತರಬೇತಿ ಪಡೆಯಲು ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಆಗಿದ್ದು, ಆಯಾ ಕಾಲೇಜು ಮಟ್ಟದಲ್ಲಿ ಸಂದರ್ಶನದ ಮೂಲಕ ಪ್ರವೇಶ ನೀಡಲಾಗುತ್ತಿತ್ತು. ಆಗ ಪ್ರತಿ ಕಾಲೇಜಿನಲ್ಲಿ ಗರಿಷ್ಠ 50 ಅಭ್ಯರ್ಥಿಗಳಿಗೆ ಅವಕಾಶವಿದ್ದರೂ ಹೆಚ್ಚಿನವರು ಸೇರಲು ಆಸಕ್ತಿ ತೋರುತ್ತಿರಲಿಲ್ಲ. ನಂತರದ ವರ್ಷಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸರ್ಕಾರಗಳು ಒತ್ತು ನೀಡಿ ಶಿಕ್ಷಕರ ನೇಮಕ ಮಾಡಿಕೊಳ್ಳುತ್ತಿದ್ದಂತೆಯೇ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಯಿತು. ಆಗ ಆಯಾ ಕಾಲೇಜು ಮಟ್ಟದಲ್ಲಿ ಮೆರಿಟ್ ಆಧಾರದ ಮೇಲೆ 30 ಅಭ್ಯರ್ಥಿಗಳಿಗೆ ಪ್ರವೇಶ ದೊರೆಯಲಾರಂಭಿಸಿತು. ತರುವಾಯ, ತರಬೇತಿಗೆ ಬೇಡಿಕೆ ಹೆಚ್ಚಾದಂತೆ ಮೆರಿಟ್ ಮತ್ತು ಮೀಸಲಾತಿಗೆ ತಕ್ಕಂತೆ ಪ್ರವೇಶ ನೀಡಲಾಗುತ್ತಿತ್ತು.
ಮಾದರಿ ಕ್ರಮ
ಎಚ್.ಜಿ.ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ ಯಾವ ಪ್ರಭಾವಕ್ಕೂ ಒಳಗಾಗದೆ, ಒಂದು ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಿಕ್ಷಕರನ್ನು ಪ್ರವೇಶ ಪರೀಕ್ಷೆಯ ಮೂಲಕ ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಂಡರು. ಈ ಪಾರದರ್ಶಕ ಕ್ರಮ ಇಡೀ ರಾಷ್ಟ್ರಕ್ಕೆ ಮಾದರಿಯಾಯಿತು. ಮಕ್ಕಳನ್ನು ಲಾಲಿಸಿ ಪಾಲಿಸಿ ಪ್ರೀತಿಯಿಂದ ಕಲಿಸಲು ಸೂಕ್ತ ಎಂಬ ಕಾರಣಕ್ಕೆ ಈ ಆಯ್ಕೆಯಲ್ಲಿ ಶೇ 50ರಷ್ಟು ಮಹಿಳೆಯರಿಗೆ ಅವಕಾಶ ನೀಡಿದ್ದು ಸಹ ಇತಿಹಾಸ. ಆಗ ರಾಜ್ಯದಲ್ಲಿ ಅನುದಾನಿತ, ಅನುದಾನ ರಹಿತ ಸರ್ಕಾರಿ ಟಿ.ಸಿ.ಎಚ್ ಕಾಲೇಜುಗಳು ಮತ್ತು ಡಯಟ್‌ಗಳು ಸೇರಿದಂತೆ 234 ತರಬೇತಿ ಕಾಲೇಜುಗಳು ಮಾತ್ರ ಇದ್ದವು. ಇವೆಲ್ಲವುಗಳಿಂದ ಪ್ರತಿ ವರ್ಷ ತರಬೇತಿ ಮುಗಿಸಿಕೊಂಡು ಬರುತ್ತಿದ್ದವರ ಸಂಖ್ಯೆ ಕೇವಲ 4ರಿಂದ 5 ಸಾವಿರ. ಆದರೆ ಇವರೆಲ್ಲರೂ ಕೋರ್ಸ್ ಮುಗಿಸಿದ ಒಂದೆರಡು ತಿಂಗಳಲ್ಲೇ ಸರ್ಕಾರಿ ಕೆಲಸ ಪಡೆಯುತ್ತಿದ್ದುದು ಗಮನಾರ್ಹ.
ಹೀಗೆ 2002ರವರೆಗೆ ಟಿ.ಸಿ.ಎಚ್ ಎಂಬ ಹೆಸರು ಹೊಂದಿದ್ದ ಇಂದಿನ ಡಿ.ಇಡಿ.ಗೆ ಅತ್ಯಂತ ಬೇಡಿಕೆ ಸೃಷ್ಟಿಯಾಯಿತು. ಬಳಿಕ ಬಂದ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರದಲ್ಲಿ ಡಿ.ಇಡಿ ಕಾಲೇಜುಗಳ ಸಂಖ್ಯೆ 1016ಕ್ಕೆ ಏರಿತು. ಈ ಮೂಲಕ, ಡಿ.ಇಡಿ ಆಕಾಂಕ್ಷಿಗಳ ಸಂಖ್ಯೆ ಮತ್ತು ಬೇಡಿಕೆ ಊಹಿಸಲಾರದಷ್ಟು ಹೆಚ್ಚಾದಾಗ, ಅವರೆಲ್ಲರಿಗೂ ಪ್ರವೇಶ ನೀಡಲು ಸಾಧ್ಯವಾಗಲಿಲ್ಲ. ಆಗ ಮೆರಿಟ್ ಮತ್ತು ಮೀಸಲಾತಿಗೆ ಅನುಗುಣವಾಗಿ ಪ್ರವೇಶ ನೀಡಲು ಕೇಂದ್ರೀಕೃತ ದಾಖಲಾತಿ ಘಟಕವನ್ನು ತೆರೆದು, ರಾಜ್ಯ ಮಟ್ಟದಲ್ಲಿ ಡಯಟ್‌ಗಳ ಮೂಲಕ ಸೀಟು ಹಂಚಿಕೆ  ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.
ಈ ಸಂದರ್ಭದಲ್ಲಿ ಡಿ.ಇಡಿ.ಗೆ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯಲು ಪಿ.ಯು.ಸಿ.ಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕಿತ್ತು. ಅಂದು ಬಿ.ಇ, ಬಿ.ಎ.ಎಂ.ಎಸ್, ಬಿ.ಡಿ.ಎಸ್, ಬಿ.ಇಡಿ ಇತ್ಯಾದಿ ಕೋರ್ಸ್‌ಗಳಿಗೆ ಸುಲಭವಾಗಿ ಪ್ರವೇಶ ದೊರೆಯುತ್ತಿದ್ದರೂ ಡಿ.ಇಡಿ.ಗೆ ಪ್ರವೇಶ ಸಿಗುವುದು ದುಸ್ತರವಾಗಿತ್ತು.
ಸರ್ಕಾರ 95ರ ದಶಕದಲ್ಲಿ ಪ್ರಾಥಮಿಕ ಶಾಲೆಗಳಿಗೆ 1:40 ಅನುಪಾತದಂತೆ ಶಿಕ್ಷಕರನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿತು. ಪ್ರತಿ ವರ್ಷ ಈ ಆಯ್ಕೆ ನಡೆಯುತ್ತಿದ್ದುದರಿಂದ ಸರ್ಕಾರಿ ಕೆಲಸ ಗ್ಯಾರಂಟಿ ಎಂಬುದು ವಿದ್ಯಾರ್ಥಿಗಳ ನಿರೀಕ್ಷೆಯಾಗಿತ್ತು.
ಅಂದು ಬಿ.ಇ, ಕಾನೂನು ಮತ್ತಿತರ ಪದವಿ ಪಡೆದ ಪ್ರತಿಭಾವಂತರು ಸಹ ಡಿ.ಇಡಿ. ತರಬೇತಿ ಪಡೆದು ಸರ್ಕಾರಿ ಶಾಲೆಗಳಿಗೆ ಶಿಕ್ಷಕರಾಗಿ ನೇಮಕಗೊಳ್ಳುತ್ತಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬೇಡಿಕೆ ಹೆಚ್ಚಾದಂತೆ ದಕ್ಷಿಣ ಭಾರತದ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕ ಸಹ 1994ರಲ್ಲಿ ಪಿ.ಯು.ಸಿ.ಯನ್ನು ಕನಿಷ್ಠ ವಿದ್ಯಾರ್ಹತೆಯಾಗಿ ನಿಗದಿಪಡಿಸಿತು. ಇದರಿಂದ ಗುಣಮಟ್ಟದ ಶಿಕ್ಷಕರಿಗೆ ತರಬೇತಿಯನ್ನು ನೀಡಲು ಅವಕಾಶವಾಯಿತು.
2008ರಲ್ಲಿ ರಾಷ್ಟ್ರ ಮಟ್ಟದ ಎನ್.ಸಿ.ಟಿ.ಇ ದೇಶದ ಎಲ್ಲ ಡಿ.ಇಡಿ, ಬಿ.ಇಡಿ. ಕಾಲೇಜುಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅವುಗಳ ಪ್ರವೇಶದ ಮಿತಿಯನ್ನು 30ರಿಂದ 50ಕ್ಕೆ ಏರಿಸಿತು. ಜೊತೆಗೆ ರಾಜ್ಯ ಸರ್ಕಾರ ಮನಸೋ ಇಚ್ಛೆ ಕಾಲೇಜುಗಳನ್ನು ಆರಂಭಿಸಲು ಅವಕಾಶ ನೀಡಿದ್ದರಿಂದ ಪ್ರತಿ ವರ್ಷ ಡಿ.ಇಡಿ ತರಬೇತಿ ಪಡೆದು ಬರುವವರ ಸಂಖ್ಯೆ ಸುಮಾರು 50,000ಕ್ಕಿಂತ ಹೆಚ್ಚಾಯಿತು. ಆದರೆ ನೇಮಕಾತಿ ಮಾತ್ರ ಐದಾರು ಸಾವಿರ ಮಾತ್ರವಾದ್ದರಿಂದ ಕೆಲಸ ಸಿಗದವರ ಸಂಖ್ಯೆ ಹೆಚ್ಚಾಗುತ್ತಲೇ ಹೋಗಿ, ಇಂದು ಅದು ಹತ್ತಾರು ಲಕ್ಷಕ್ಕೆ ಏರಿದೆ. 
ರಾಜ್ಯದಲ್ಲಿ ಅಂದಾಜು 51,180 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ.
ಬದಲಾದ ಸ್ಥಿತಿ
ಡಿ.ಇಡಿ ಕಾಲೇಜುಗಳಲ್ಲಿ ಹುಡುಗಿಯರೇ ಹೆಚ್ಚಾಗಿದ್ದು, ಬೆರಳೆಣಿಕೆಯಷ್ಟು ಹುಡುಗರಿರುತ್ತಿದ್ದರು. ಸ್ವಾವಲಂಬಿ ಜೀವನದ ಆಕಾಂಕ್ಷೆ, ಆಯ್ಕೆಯಲ್ಲಿ ಶೇ 50 ಮೀಸಲಾತಿ, ಕೆಲಸದ ಖಚಿತತೆ ಇತ್ಯಾದಿ ಕಾರಣಗಳಿಂದ ಡಿ.ಇಡಿ ಸೇರಲು ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರೇರಣೆ ದೊರೆಯುತ್ತಿತ್ತು. ಸರ್ಕಾರಿ ಕೆಲಸ ಸಿಗದಿದ್ದರೂ ಖಾಸಗಿ ಶಾಲೆಗಳಲ್ಲಾದರೂ ನಾಲ್ಕಾರು ಸಾವಿರ ಸಂಬಳ ತೆಗೆದುಕೊಂಡು ಸ್ವಾವಲಂಬಿ ಜೀವನ ನಡೆಸಲಿ ಎಂಬ ಆಸೆಯಿಂದ ಎಷ್ಟೋ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಶಿಕ್ಷಕರ ತರಬೇತಿಗೆ ಸೇರಿಸುತ್ತಿದ್ದರು. ಇದರಿಂದ ಡಿ.ಇಡಿ ತರಬೇತಿಗೆ ಬೇಡಿಕೆ ಹೆಚ್ಚಾಗಿ ಖಾಸಗಿ ಡಿ.ಇಡಿ ಸಂಸ್ಥೆಗಳ ಆಡಳಿತ ಮಂಡಳಿಗಳವರು ಸೀಟುಗಳನ್ನು ಮಾರಿಕೊಂಡು ದಿನ ಬೆಳಗಾಗುವುದರಲ್ಲಿ ಕುಬೇರರಾಗುತ್ತಿದ್ದರು.
2011ರವರೆಗೆ ಜಿಲ್ಲಾ ಮಟ್ಟದ ಡಯಟ್‌ಗಳ ಮೂಲಕ ಅರ್ಜಿ ಕರೆದು ಮೆರಿಟ್, ಮೀಸಲಾತಿ ಮತ್ತು ಸಾಮಾನ್ಯ ವರ್ಗದವರಿಗೆ ದ್ವಿತೀಯ ಪಿ.ಯು.ಸಿ.ಯಲ್ಲಿ ಕನಿಷ್ಠ ಶೇ 50, ಪ.ಜಾತಿ/ಪಂಗಡ, ಅಂಗವಿಕಲರು, ಪ್ರವರ್ಗ 1ಕ್ಕೆ ಶೇ 45 ಅಂಕ ನಿರ್ಧರಿಸಿ, ಸರ್ಕಾರಿ ಮತ್ತು ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ನೀಡಲಾಗುತ್ತಿತ್ತು. ಆದರೆ 2012-13ರಿಂದ ಡಿ.ಇಡಿ ಪ್ರವೇಶ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನವನ್ನು ಸರಳಗೊಳಿಸಿದ್ದರೂ ಇಂದು ಈ ತರಬೇತಿಗೆ ಅರ್ಜಿ ಹಾಕುವವರ ಸಂಖ್ಯೆ ಕಡಿಮೆಯಾಗಿದೆ. ಕೆಲವು ಪೋಷಕರು ಸರ್ಕಾರಿ ಕೆಲಸ ಸಿಗಬಹುದೆಂಬ ಆಸೆಯಿಂದ ಹಣ ಖರ್ಚು ಮಾಡಿ ಮಕ್ಕಳಿಗೆ ಡಿ.ಇಡಿ ತರಬೇತಿ ಕೊಡಿಸಿ, ಇತ್ತ ಕೆಲಸ ಅತ್ತ ದುಡ್ಡು ಎರಡೂ ಇಲ್ಲದೆ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.
ಖಾಸಗಿ ಕಾಲೇಜುಗಳು ಅಸ್ತಿತ್ವ ಉಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಏನೆಲ್ಲ ಆಸೆ ತೋರಿಸಿ, ದೂರಶಿಕ್ಷಣದ ರೀತಿಯಲ್ಲಿ ತರಬೇತಿ ನೀಡುವ ಸ್ಥಿತಿಯನ್ನು ತಲುಪಿವೆ. ನಾ ಮುಂದು ತಾ ಮುಂದು ಎಂದು ಸ್ಪರ್ಧೆಯೊಂದಿಗೆ ಪ್ರವೇಶ ನೀಡಿ, ತಮ್ಮ ಸಂಸ್ಥೆಯನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿವೆ. ಆದರೂ ನಿರೀಕ್ಷೆಯಷ್ಟು ವಿದ್ಯಾರ್ಥಿಗಳು ಸೇರುತ್ತಿಲ್ಲ. ಹೆಚ್ಚಿನ ಸಂಸ್ಥೆಗಳು ತರಬೇತಿ, ಹಾಜರಾತಿಯಲ್ಲೂ ವಿನಾಯಿತಿ ನೀಡಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುತ್ತಿವೆ. ನಾ ಬಿಡೆ, ನೀ ಕೊಡೆ ಎಂಬಂತೆ ಆಸಕ್ತಿಯೇ ಇಲ್ಲದ ವಿದ್ಯಾರ್ಥಿಗಳಿಗೂ ಪ್ರವೇಶ ನೀಡುತ್ತಿವೆ. ವಿಶೇಷ ಎಂದರೆ ಇವರಲ್ಲಿ ಕೆಲವರು ಪ್ರವೇಶ ಪಡೆದ ದಿನ ಕಾಲೇಜಿಗೆ ಬಂದರೆ ನಂತರ ಪರೀಕ್ಷೆಯ ದಿನವಷ್ಟೇ ಬರುವವರಿದ್ದಾರೆ. ಇಂತಹವರು ಶಿಕ್ಷಕರಾಗಿ ಬಂದರೆ ನಮ್ಮ ಮಕ್ಕಳ ಭವಿಷ್ಯ ಊಹಿಸುವಂತಿಲ್ಲ.
ಕಾರಣ ಏನು?
ಹಿಂದಿನ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಸದುದ್ದೇಶದಿಂದ ಡಿ.ಇಡಿ ಕಾಲೇಜು ಆರಂಭಿಸಲು ತೀರ್ಮಾನಿಸಿದಾಗ ರಾಜಕಾರಣಿಗಳು ಹಾಗೂ ಅವರ ಅನುಯಾಯಿಗಳು ಅದನ್ನು ದುರುಪಯೋಗ ಪಡಿಸಿಕೊಂಡರು. ಇಲಾಖೆಯ ಕನಿಷ್ಠ ಮಾನದಂಡಗಳನ್ನೂ ಅನುಸರಿಸದೆ, ಹಳ್ಳಿ, ಪಟ್ಟಣ, ನಗರಗಳ ಮೂಲೆ ಮೂಲೆಯ ಶೆಡ್ಡು, ಮನೆಗಳಲ್ಲಿ ದಿನಸಿ ಅಂಗಡಿಗಳಂತೆ ಡಿ.ಇಡಿ. ಮತ್ತು ಬಿ.ಇಡಿ ಕಾಲೇಜುಗಳನ್ನು ಆರಂಭಿಸಲು ಮುಂದಾದರು. ಎನ್.ಸಿ.ಟಿ.ಇ.ಯಂತಹ ರಾಷ್ಟ್ರ ಮಟ್ಟದ ಸಂಸ್ಥೆಯು ಕಾಲೇಜುಗಳ ಕಟ್ಟಡ, ಮೂಲ ಸೌಲಭ್ಯ, ಅಗತ್ಯ ಉಪನ್ಯಾಸಕರು ಇತ್ಯಾದಿ ಮಾನದಂಡಗಳನ್ನು ವಿಧಿಸಿದ್ದರೂ, ಕೇಂದ್ರ ಪರಿಶೀಲನಾ ಸಮಿತಿಯ ದಿಕ್ಕು ತಪ್ಪಿ, ರಾಜ್ಯ ಸರ್ಕಾರದಿಂದ ನಿರಾಕ್ಷೇಪಣಾ ಪತ್ರ (ಎನ್.ಒ.ಸಿ) ಪಡೆದು ಶಿಕ್ಷಣದ ಗಂಧ ಗಾಳಿ ಅರಿಯದ, ಪಾವಿತ್ರ್ಯವೂ ತಿಳಿಯದ ವ್ಯಾಪಾರಿ ಮನೋಭಾವದವರು ಡಿ.ಇಡಿ., ಬಿ.ಇಡಿ. ಸಂಸ್ಥೆಗಳನ್ನು ಆರಂಭಿಸಲು ಮುಂದಾದದ್ದು ಒಂದು ದುರಂತ.
1996ರವರೆಗೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಪ್ರತ್ಯೇಕ ಕೋಟಾ ಇರಲಿಲ್ಲ. ನಂತರ ಸರ್ಕಾರ ಸಾಮಾನ್ಯ ವರ್ಗದ  ಅನುದಾನಿತ ಕಾಲೇಜುಗಳಿಗೆ ಶೇಕಡಾ 25, ಅಲ್ಪಸಂಖ್ಯಾತರ ಅನುದಾನಿತ ಕಾಲೇಜುಗಳಿಗೆ ಶೇಕಡಾ 35 ಮತ್ತು ಅನುದಾನರಹಿತ ಕಾಲೇಜುಗಳಿಗೆ ಶೇಕಡಾ 50ರಷ್ಟು ಸೀಟನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಿತು. ಉಳಿದ ಸೀಟುಗಳನ್ನು ಸರ್ಕಾರ ನೇರವಾಗಿ ಮೆರಿಟ್ ಮತ್ತು ಮೀಸಲಾತಿ ಆಧರಿಸಿ ಭರ್ತಿ ಮಾಡುವ ನಿಯಮವನ್ನು ರೂಪಿಸಿತು. ಇದರಿಂದ ಶಿಕ್ಷಕರ ತರಬೇತಿ ಸಂಸ್ಥೆಗಳು ನಿರ್ವಹಣೆಗೆ 50 ಸಾವಿರದಿಂದ ಒಂದೂವರೆ ಲಕ್ಷದವರೆಗೆ ಡೊನೇಷನ್ ಪಡೆದುಕೊಳ್ಳಲು ಅವಕಾಶವಾಯಿತು. ಅಲ್ಲದೆ ಕಡಿಮೆ ಅಂಕ ಗಳಿಸಿದವರಿಗೂ ಸೀಟು ಸಿಗುವ ವ್ಯವಸ್ಥೆಯಾಯಿತು.
2003-04ರಲ್ಲಿ ಎನ್.ಸಿ.ಟಿ.ಇ.ಯು ಡಿ.ಇಡಿ ಮತ್ತು ಬಿ.ಇಡಿ ಶಿಕ್ಷಕರ ತರಬೇತಿ ಸಂಸ್ಥೆಗಳ ಗುಣಮಟ್ಟ ಸುಧಾರಣೆಗೆ ಕೆಲವು ಮಾನಕಗಳನ್ನು ರೂಪಿಸಿ, ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಈ ಸಂಸ್ಥೆಗಳಲ್ಲಿ ಬೋಧಿಸುವ ಉಪನ್ಯಾಸಕರ ಕನಿಷ್ಠ ವಿದ್ಯಾರ್ಹತೆ ಹಿಂದೆ ಬಿ.ಇಡಿ ಇದ್ದದ್ದನ್ನು ಉನ್ನತೀಕರಿಸಿ ಎಂ.ಇಡಿ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ಕಡ್ಡಾಯ ಮಾಡಲಾಯಿತು. ಇದರಿಂದ ಇಡೀ ರಾಷ್ಟ್ರ ದಲ್ಲಿ ಎಂ.ಇಡಿ ಸ್ನಾತಕೋತ್ತರ ಪದವಿಗೆ ಬೇಡಿಕೆ ಹೆಚ್ಚಾಯಿತು. ಇದರ ಪರಿಣಾಮವಾಗಿ ರಾಜ್ಯದ ವಿ.ವಿ.ಗಳು ತಮ್ಮ ಅಧೀನದ ಶಿಕ್ಷಣ ಸಂಸ್ಥೆಗಳಿಗೆ ಎಂ.ಇಡಿ ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಅಗತ್ಯಕ್ಕಿಂತ ಹೆಚ್ಚು ಆರಂಭಿಸಲು ಅನುಮತಿ ನೀಡಿದವು. ಇದರಿಂದ ಇವು ಸಹ ಇಂದು ಡಿ.ಇಡಿ ಕಾಲೇಜುಗಳಂತೆ ವಿದ್ಯಾರ್ಥಿಗಳಿಲ್ಲದೆ ಅನಾಥವಾಗುತ್ತಿವೆ.
ಸ್ವಯಂ ಬಂದ್
2003-04ರ ನಂತರ ಡಿ.ಇಡಿ ಕಾಲೇಜುಗಳ ಸಂಖ್ಯೆ ಅತ್ಯಂತ ಹೆಚ್ಚಿದ್ದು 1016 ಕಾಲೇಜುಗಳಲ್ಲಿ ಪ್ರಥಮ ವರ್ಷಕ್ಕೆ ಪ್ರತಿ ಕಾಲೇಜಿನಲ್ಲಿ 50 ವಿದ್ಯಾರ್ಥಿಗಳಂತೆ ರಾಜ್ಯದಲ್ಲಿ ಒಟ್ಟು 50- 60 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಅವಕಾಶವಿತ್ತು. ನಂತರ ಬೇಡಿಕೆ ಕಡಿಮೆಯಾದಂತೆ ಕಾಲೇಜುಗಳು ಸ್ವಯಂ ಬಂದ್ ಆಗುತ್ತಾ ಬಂದವು. 2010ರಲ್ಲಿ 1002 ಕಾಲೇಜುಗಳು, 2010-11 ನೇ ಸಾಲಿನಲ್ಲಿ 916 ಕಾಲೇಜುಗಳಿದ್ದು, 2013-14 ನೇ ಸಾಲಿನಲ್ಲಿ ಅವುಗಳ ಸಂಖ್ಯೆ 824ಕ್ಕೆ ಇಳಿದಿರುವುದು ಅವನತಿಯ ಮುನ್ಸೂಚನೆಯಂತಿದೆ.
ಇವುಗಳಲ್ಲಿ ರಾಜ್ಯ ಮಟ್ಟದಲ್ಲಿ ತರಬೇತಿ ನೀಡುತ್ತಿರುವ 29 ಡಯಟ್, 14 ಸರ್ಕಾರಿ, 42 ಅನುದಾನಿತ ಮತ್ತು 759 ಅನುದಾನರಹಿತ ಸಂಸ್ಥೆಗಳು ಸೇರಿವೆ. ಸರ್ಕಾರಿ ಕೋಟಾದಲ್ಲಿ 28,000 ಅಭ್ಯರ್ಥಿಗಳ ತರಬೇತಿಗೆ ಅವಕಾಶವಿದೆ. ಆದರೂ ಈ ವರ್ಷ ಇಡೀ ರಾಜ್ಯದಲ್ಲಿ ಅರ್ಜಿ ಸಲ್ಲಿಸಿರುವವರ ಸಂಖ್ಯೆಯೇ ಕೇವಲ 1,182. ಬಹಳಷ್ಟು ಕಾಲೇಜುಗಳಿಗೆ ಒಂದು ಅರ್ಜಿಯೂ ಸಲ್ಲಿಕೆ ಆಗಿಲ್ಲ. ಆಕಾಂಕ್ಷಿಗಳ ಸಂಖ್ಯೆ ಯಾರೂ ಊಹಿಸಲಾರದಷ್ಟು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದ್ದರಿಂದ ಬಹಳಷ್ಟು ಕಾಲೇಜುಗಳು ತಂತಾನೇ ಮುಚ್ಚಿಕೊಳ್ಳುತ್ತಿವೆ. ಹೀಗಾಗಿ ಪ್ರಾಥಮಿಕ ಶಿಕ್ಷಣದ ಬುನಾದಿಯಾಗಿರುವ ಡಿ.ಇಡಿ ಕಾಲೇಜುಗಳ ಗತಿ ಮುಂದೇನು ಎಂಬಂತಾಗಿದೆ.
ಡಿ.ಇಡಿ ಕಾಲೇಜುಗಳ ಈ ಸ್ಥಿತಿಗೆ ಸಾವಿರಾರು ಸಂಸ್ಥೆಗಳನ್ನು ಆರಂಭಿಸಲು ಅವಕಾಶ ನೀಡಿದ್ದು, ಡಿ.ಇಡಿ ತರಬೇತಿ ಪಡೆದವರು ಕೇವಲ ಕಿರಿಯ ಪ್ರಾಥಮಿಕ ಶಾಲೆಗೆ ಮಾತ್ರ ಶಿಕ್ಷಕರಾಗಲು ಅವಕಾಶ ಇರುವುದು, ವರ್ಷಕ್ಕೆ 50 ಸಾವಿರಕ್ಕಿಂತ ಹೆಚ್ಚು ಮಂದಿ ತರಬೇತಿ ಪಡೆದು ಹೊರಬರುತ್ತಿರುವುದು, ಎರಡು ಮೂರು ವರ್ಷಕ್ಕೊಮ್ಮೆ 3- 4 ಸಾವಿರ ಸಂಖ್ಯೆಯಷ್ಟು ನೇಮಕಾತಿ ಮಾತ್ರ ಆಗುತ್ತಿರುವುದು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಆಗುತ್ತಿರುವುದು, ಸುಮಾರು 12,000 ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರು ಇರುವುದು, ಖಾಸಗಿ ಆಂಗ್ಲ ಮಾಧ್ಯಮ, ಕೇಂದ್ರೀಯ ಪಠ್ಯಕ್ರಮ ಹೊಂದಿರುವ ಶಾಲೆಗಳಿಗೇ ಹೆಚ್ಚು ಮಕ್ಕಳು ಸೇರುತ್ತಿರುವುದು, ಗುತ್ತಿಗೆ ಅಥವಾ ಗೌರವ ಶಿಕ್ಷಕರ ನೇಮಕ, ಡಿ.ಇಡಿ ಪ್ರವೇಶಕ್ಕೆ ಸಾಮಾನ್ಯ ವರ್ಗದವರಿಗೆ ಕನಿಷ್ಠ ಶೇ 50 ಅಂಕ ನಿರ್ಧರಿಸಿರುವುದು ಇತ್ಯಾದಿಗಳು ಬಹು ಮುಖ್ಯವಾದ ಕಾರಣಗಳಾಗಿವೆ.
ಸಂವಿಧಾನದ ಪ್ರಕಾರ, 6ರಿಂದ 14 ವರ್ಷದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಮೂಲಭೂತ ಹಕ್ಕು. ಹಾಗಾಗಿ ಪ್ರಾಥಮಿಕ ಶಿಕ್ಷಕರ ತರಬೇತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು. ಈ ಮೂಲಕ, ಮುಂಚಿನಂತೆಯೇ ಈ ತರಬೇತಿಗೆ ಬೇಡಿಕೆ ಸೃಷ್ಟಿಯಾಗಿ ಹೆಚ್ಚಿನ ವಿದ್ಯಾರ್ಥಿಗಳು ಇದರತ್ತ ಆಕರ್ಷಿತರಾಗುವಂತೆ ಮಾಡಬೇಕು.

Saturday 24 August 2013

ಸ್ವಾತಂತ್ರ್ಯೋತ್ಸವ ಪರಿಷೆ 15-08-2013

ದಿ. 15-08-2013 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 67ನೆಯ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಆ ಸಂಭ್ರಮಾಚರಣೆಯ ಒಂದಿಷ್ಟು ಛಾಯಾಚಿತ್ರಗಳು..
ಬಾನಲಿ ಹಾರಿದ ಧ್ವಜ





ಭಾಷಣ ಮಾಡುತ್ತಿರುವ ಚಿಣ್ಣರು




ಸಾಂಸ್ಕೃತಿಕ ಸ್ಫರ್ಧೆಗಳು




















ಗುರು ಶಿಷ್ಯರು ನಾಟಕ ಪ್ರದರ್ಶನ


















Friday 23 August 2013

ಇನ್ರ್‌ಸ್ಫೈರ್ ಅವಾರ್ಡ್ ಯಾಕೀ ಆಭಾಸ?


ಜಾಗತಿಕ ಮಟ್ಟದಲ್ಲಿ ದೇಶದ ವಿಜ್ಞಾನಿಗಳ ಸಾಧನೆ ಅತ್ಯುನ್ನತ ಮಟ್ಟದಲ್ಲಿ ಇದೆ. ಆದರೆ ವಿಜ್ಞಾನ ಸಂಶೋಧನೆಯಲ್ಲಿ ಮಾತ್ರ ನಮ್ಮ ಸಾಧನೆಯು, ಜನಸಂಖ್ಯೆ ಮತ್ತು ವಿಸ್ತಾರದಲ್ಲಿ ಚಿಕ್ಕದಾದ ಜಪಾನ್‌ನ ಸಂಶೋಧನೆಯ ಮಟ್ಟಕ್ಕಿಂತ ತುಂಬಾ ಕೆಳ ಸ್ತರದಲ್ಲಿ ಇದೆ.
ಇದರಿಂದ, ಪ್ರತಿಭಾನ್ವಿತ ವಿದ್ಯಾರ್ಥಿಗಳು ವಿಜ್ಞಾನ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ ಎಂಬುದನ್ನು ಮನಗಂಡ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 2008ರಲ್ಲಿ ಒಂದು ವಿಶಿಷ್ಟ ಯೋಜನೆಯನ್ನು ಜಾರಿಗೆ ತಂದಿದೆ. ಅದೇ ““INSPIRE”  ((Innovation in Science Pursuit for Inspired Research). ಇದರ ಮೂಲ ಉದ್ದೇಶ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿ ಮೂಡಿಸುವುದು. ಈಗಿರುವ ಶೈಕ್ಷಣಿಕ ವ್ಯವಸ್ಥೆಯ ಮೂಲಕವೇ ಪ್ರತಿಭಾವಂತರನ್ನು ಗುರುತಿಸಿ ಉತ್ತೇಜನ ನೀಡುವ ಉದಾತ್ತ ಆಶಯವನ್ನು ಈ ಯೋಜನೆ ಹೊಂದಿದೆ.
ಪ್ರಾಥಮಿಕ, ಪ್ರೌಢಶಾಲಾ ಹಂತದಲ್ಲಿ ದೇಶದ ಪ್ರತಿ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗಿನ ಇಬ್ಬರು ಪ್ರತಿಭಾನ್ವಿತರಿಗೆ ತಲಾ 5000 ರೂಪಾಯಿ ಸಹಾಯಧನ ನೀಡಿ, ಆ ಮೂಲಕ ಅವರು ಸೃಜನಾತ್ಮಕವಾದ ವೈಜ್ಞಾನಿಕ ಯೋಜನೆಯಲ್ಲಿ ತೊಡಗಿಕೊಳ್ಳಲು ಮತ್ತು ಕ್ರಿಯಾತ್ಮಕ ವಿಜ್ಞಾನದ ಮಾದರಿಯನ್ನು ತಯಾರಿಸಲು ಯೋಜನೆ ಪ್ರೇರೇಪಿಸುತ್ತದೆ. ಅವರ ಈ ಸೃಜನಾತ್ಮಕ ವಿಜ್ಞಾನ ಮಾದರಿಯನ್ನು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಜ್ಞಾನ ಪ್ರದರ್ಶನಗಳಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗುತ್ತದೆ. ಈ ಯೋಜನೆಯಡಿ ನಮ್ಮ ರಾಜ್ಯಕ್ಕೆ ಎರಡು ಹಂತಗಳಲ್ಲಿ ಸುಮಾರು 70 ಕೋಟಿಯಷ್ಟು ಹಣ ಬಿಡುಗಡೆಯಾಗಿದೆ. 71,432 ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದಾರೆ. 2020ರ ಹೊತ್ತಿಗೆ ದೇಶವನ್ನು ಜ್ಞಾನ ಸಮೃದ್ಧ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಒಂದು ದೂರದೃಷ್ಟಿಯ ಯೋಜನೆ ಇದಾಗಿದೆ.
ಆದರೆ... ಇತ್ತೀಚೆಗೆ ನಾನು ಜಿಲ್ಲಾ ಮಟ್ಟದ ಎರಡು`ಇನ್ಸ್‌ಪೈರ್ ಅವಾರ್ಡ್' ವಿಜ್ಞಾನ ಮಾದರಿ ಪ್ರದರ್ಶನಗಳಿಗೆ ಮುಖ್ಯ ತೀರ್ಪುಗಾರಳಾಗಿ ಭಾಗವಹಿಸಿದ್ದೆ. ಈ ಕಾರ್ಯಕ್ರಮ ಮಕ್ಕಳ ಸೃಜನಶೀಲತೆಯ ಪ್ರದರ್ಶನದ ಬದಲು, ವಿಜ್ಞಾನದ ಸಿದ್ಧ ಮಾದರಿಗಳ ಒಂದು ಮೇಳ ಎಂಬಂತೆ ನನಗೆ ಭಾಸವಾಯಿತು. ಅಲ್ಲಿ ಜನಪ್ರಿಯ ವಿಜ್ಞಾನ ಸಿದ್ಧಾಂತಗಳನ್ನು ಬಿಂಬಿಸುವ ಮಾದರಿಗಳು ಪ್ರದರ್ಶನಗೊಂಡಿದ್ದವು. ಮಕ್ಕಳ ಕ್ರಿಯಾಶಕ್ತಿಗೆ ಪ್ರದರ್ಶನದಲ್ಲಿ ಅವಕಾಶ ಇರಲಿಲ್ಲ. ಅಲ್ಲಿ ಪ್ರದರ್ಶನಗೊಂಡಿದ್ದ ಶೇ 99 ಮಾದರಿಗಳು ಮಾರುಕಟ್ಟೆಯಿಂದ ಖರೀದಿಸಿ ತಂದವಾಗಿದ್ದವು.
ಇನ್ನೂ ತಮಾಷೆಯ ಸಂಗತಿ ಎಂದರೆ `ಇನ್ಸ್‌ಪೈರ್ ಅವಾರ್ಡ್' ಯೋಜನೆಗಾಗಿ ವಿಜ್ಞಾನದ ಸಿದ್ಧ ಮಾದರಿಗಳನ್ನು ತಯಾರಿಸಿ ಕೊಡುವ ಸಲುವಾಗಿಯೇ ಅನೇಕ ಸಂಸ್ಥೆಗಳು ಹುಟ್ಟಿಕೊಂಡಿರುವುದು. ಅವು ಪ್ರದರ್ಶನದ ಎರಡು ತಿಂಗಳ ಮೊದಲೇ ಎಲ್ಲ ಶಾಲೆಗಳಿಗೆ ತೆರಳಿ ತಮ್ಮಲ್ಲಿ ದೊರೆಯುವ ವಿಜ್ಞಾನ ಮಾದರಿಗಳ ಬಗ್ಗೆ ಕರಪತ್ರಗಳನ್ನು ಹಂಚುತ್ತವೆ. ಹಾಗಾಗಿ ನಾನು ತೀರ್ಪುಗಾರಳಾಗಿದ್ದ ಎರಡು ಕೇಂದ್ರಗಳ ನಡುವೆ 125 ಕಿ.ಮೀ. ಅಂತರ ಇದ್ದರೂ, ಎರಡೂ ಕಡೆ ಪ್ರದರ್ಶನಗೊಂಡ ಮಾದರಿಗಳಲ್ಲಿ ಹೆಚ್ಚೇನೂ ವ್ಯತ್ಯಾಸ ಇಲ್ಲದೆ ಒಂದೇ ತೆರನಾಗಿದ್ದವು.
ಜಿಲ್ಲಾ ಮಟ್ಟದ ಈ ಎರಡೂ `ಇನ್ಸ್‌ಪೈರ್ ಅವಾರ್ಡ್' ವಿಜ್ಞಾನ ಪ್ರದರ್ಶನಗಳಲ್ಲಿ ಒಟ್ಟು 1200 ಮಾದರಿಗಳಿದ್ದವು. ಆದರೆ ಅವುಗಳಲ್ಲಿ ಬಹುತೇಕವು ಪುನರಾವರ್ತನೆಗೊಂಡಿದ್ದು, ಇನ್ಸ್‌ಪೈರ್ ಯೋಜನೆಯ ಮೂಲ ಉದ್ದೇಶಕ್ಕೆ ವಿಡಂಬನೆಯಂತೆ ಇದ್ದವು. ಅಲ್ಲಿ ನೆರೆದಿದ್ದ ಶಿಕ್ಷಕರಿಗೆ ಈ ಬಗ್ಗೆ ತಿಳಿವಳಿಕೆ ನೀಡಲು ಹೋದಾಗ ಇನ್ನೂ ಆಘಾತಕಾರಿ ವಿಷಯ ಬೆಳಕಿಗೆ ಬಂತು. ವಿದ್ಯಾರ್ಥಿಗಳಿಗೆ ಕೊಡಬೇಕಾದ 5000 ರೂಪಾಯಿ  ಸಹಾಯ ಧನದಲ್ಲಿ ಮುಖ್ಯೋಪಾಧ್ಯಾಯರು ಪ್ರದರ್ಶನದ ಎರಡು ದಿನ ಮೊದಲು, 2000 ರೂಪಾಯಿಯನ್ನು ಶಿಕ್ಷಕರಿಗೆ ಕೊಟ್ಟು ಅಂಗಡಿಯಿಂದ ವಿಜ್ಞಾನದ ಮಾದರಿಗಳನ್ನು ಕೊಂಡು ತಂದು ಪ್ರದರ್ಶಿಸುವಂತೆ ತಿಳಿಸಿದ್ದರು!
ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಎಷ್ಟೋ ವಿದ್ಯಾರ್ಥಿಗಳು ನೆಪ ಮಾತ್ರಕ್ಕೆ ಅಲ್ಲಿಗೆ ಬಂದಿದ್ದರು. ಅವರಿಗೆ ಸರಿಯಾದ ಊಟ- ವಸತಿ ವ್ಯವಸ್ಥೆ ಇಲ್ಲದ ಕಾರಣ ಒಂದೆರಡು ಗಂಟೆ ತಮ್ಮ ಮಾದರಿಗಳನ್ನು ಪ್ರದರ್ಶಿಸಿ ಎದ್ದು ಹೋದರು. ಅಂಗಡಿಯಿಂದ ಕೊಂಡು ತಂದ ಮಾದರಿಗಳಾದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ತಮ್ಮ ಮಾದರಿಯನ್ನು ಪ್ರದರ್ಶಿಸುವ ಬಗ್ಗೆಯಾಗಲೀ, ಅದರ ಬಗ್ಗೆ ಮಾಹಿತಿ ಹೇಳುವ ಅಥವಾ ಅದರ ಫಲಿತಾಂಶದ ಬಗೆಗಾಗಲೀ ಕಿಂಚಿತ್ತೂ ಆಸಕ್ತಿ ಇರಲ್ಲ್ಲಿಲ. ಕೆಲವು ವಿದ್ಯಾರ್ಥಿಗಳು ಶಿಕ್ಷಕರು ಕಲಿಸಿದ ಗಿಳಿಪಾಠವನ್ನು ಒಪ್ಪಿಸುತ್ತಿದ್ದರು. ಕೆಲ ಶಿಕ್ಷಕರಂತೂ ವಿದ್ಯಾರ್ಥಿಗಳಿಗೆ ತೊಂದರೆಯನ್ನೇ ಕೊಡದೆ ತಾವೇ ವಿವರಿಸಲು ಮುಂದಾಗುತ್ತಿದ್ದರು!
ಇನ್ನು ಈ ವಿಜ್ಞಾನ ಪ್ರದರ್ಶನಗಳ ಆಯೋಜಕರು ತಮಗೆ ಬಂದ ಲಕ್ಷಗಟ್ಟಲೆ ಹಣದ ಬಹುಪಾಲನ್ನು ರಾಜಕಾರಣಿಗಳನ್ನು ಓಲೈಸುವ ಅದ್ದೂರಿ ಉದ್ಘಾಟನಾ ಸಮಾರಂಭಕ್ಕೇ ವ್ಯಯಿಸುತ್ತಾರೆ. ಹೀಗಾಗಿ ಅಲ್ಲಿ ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ಒಲವು ಮೂಡಿಸುವ ಅಥವಾ ಅವರ ಸೃಜನಶೀಲತೆಯನ್ನು ಉತ್ತೇಜಿಸುವ ಯಾವ ಕಾರ್ಯಕ್ರಮವೂ ಕಂಡು ಬರಲಿಲ್ಲ. ಉದ್ಘಾಟನಾ ಸಮಾರಂಭಕ್ಕೆ ನೀಡುವ ಪ್ರಾಮುಖ್ಯತೆಯಿಂದಾಗಿ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಕಿರಿದಾದ ಜಾಗದಲ್ಲಿ ನೆಪಮಾತ್ರಕ್ಕೆ ಏರ್ಪಾಡು ಮಾಡಿದಂತಿತ್ತು. ಬೇಸರದ ಸಂಗತಿಯೆಂದರೆ, ಅಲ್ಲಿ ಮಕ್ಕಳಿಗೆ ಕನಿಷ್ಠ ಮೂಲಭೂತ ವ್ಯವಸ್ಥೆಯೂ ಇರಲಿಲ್ಲ.
ಇದೆಲ್ಲವನ್ನೂ ನೋಡಿದಾಗ ನಾವೆಲ್ಲಿಗೆ ಹೋಗುತ್ತಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕೋಟಿಗಟ್ಟಲೆ ಹಣ ಮಕ್ಕಳಲ್ಲಿ ಸೃಜನಾತ್ಮಕ ಶಕ್ತಿಯನ್ನು ಜಾಗೃತಗೊಳಿಸುವ ಬದಲು ಅಪವ್ಯಯವಾಗುತ್ತಿದೆ ಎನಿಸುತ್ತಿದೆ. ಸರ್ಕಾರದ ಇತರ ಇಲಾಖೆಗಳ ಕಾರ್ಯವೈಖರಿಯಂತೆ ಶಿಕ್ಷಣ ಇಲಾಖೆಯೂ ಜಡ್ಡುಗಟ್ಟಿ, ಸರ್ಕಾರದ ಯೋಜನೆಗಳನ್ನು ಆಚರಣೆಗೆ ಮಾತ್ರ ಸೀಮಿತಗೊಳಿಸಿದೆಯೇನೋ ಎಂದು ಭಾಸವಾಗುತ್ತದೆ. ಇನ್ನು ಶಿಕ್ಷಕರು ತಮ್ಮ ದೈನಂದಿನ ಪಾಠ ಪ್ರವಚನಗಳಿಗೆ ಸಹಾಯ ಆಗುವಂತಹ ವಿಜ್ಞಾನ ಮಾದರಿಗಳನ್ನು ಖರೀದಿಸಿ ವಿದ್ಯಾರ್ಥಿಗಳ ಮೂಲಕ ಪ್ರದರ್ಶಿಸಿದ್ದಾರೆ. ಇದರಿಂದ ನಮ್ಮ ಪ್ರತಿಭಾವಂತ ಶಿಕ್ಷಕರ ಕ್ರಿಯಾಶೀಲತೆ ಬಗ್ಗೆಯೇ ಅನುಮಾನ ಪಡುವಂತಾಗಿದೆ.
ಕೆಲ ವಿದ್ಯಾರ್ಥಿಗಳು ಸ್ವಾಭಾವಿಕವಾಗಿ ಎಳವೆಯಲ್ಲಿ ಪ್ರಾಯೋಗಿಕ ಮತ್ತು ವೈಜ್ಞಾನಿಕ ವಿಷಯಗಳಿಂದ ಆಕರ್ಷಿತರಾಗುತ್ತಾರೆ. ಶಿಕ್ಷಕರು ಮತ್ತು ಪೋಷಕರು ಅಂತಹ ವಿಭಿನ್ನ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪ್ರಯೋಗಶೀಲತೆ ಹಾಗೂ ತಾರ್ಕಿಕ ಚಿಂತನೆಗಳನ್ನು ಪೋಷಿಸಿದರೆ ಮಾತ್ರ ಮುಂದೆ ದೇಶ ವೈಜ್ಞಾನಿಕ ಪ್ರಗತಿ ಸಾಧಿಸಲು ಸಾಧ್ಯ.
ಭವಿಷ್ಯದಲ್ಲಿ ಉತ್ತಮ ಗುಣಮಟ್ಟದ ವಿಜ್ಞಾನಿಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಮುಖವಾದುದು. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಇನ್ಸ್‌ಪೈರ್‌ನ ಮೂಲ ಉದ್ದೇಶ ಹಾಗೂ ನಿರೀಕ್ಷಿತ ಪರಿಣಾಮ ಸಾಧಿಸುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಆ ಮೂಲಕ, ಯೋಜನೆಯ ಬಗ್ಗೆ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯ ಇದೆ. ಇಲ್ಲವಾದಲ್ಲಿ `ಇನ್ಸ್‌ಪೈರ್ ಅವಾರ್ಡ್' ಸಹ ಸರ್ಕಾರದ ಇತರ ಕೆಲವು ನಿಷ್ಪ್ರಯೋಜಕ ಯೋಜನೆಗಳಂತೆ ಆಗುವುದರಲ್ಲಿ ಸಂಶಯ ಇಲ್ಲ.
ಏಕರೂಪದ ಮಾದರಿ
ಎರಡು ಜಿಲ್ಲಾ ವಿಜ್ಞಾನ ಪ್ರದರ್ಶನಗಳಲ್ಲಿ ಪುನರಾವರ್ತನೆಗೊಂಡಿದ್ದ ವಿಜ್ಞಾನದ ಸಿದ್ಧ ಮಾದರಿಗಳು ಇಂತಿವೆ:
ಸೌರವ್ಯೆಹ, ಹೃದಯ, ಜೀರ್ಣಾಂಗ ವ್ಯೆಹ, ಮಾನವನ ಅಂಗ ರಚನೆ, ಬಹು ಉಪಯೋಗಿ ಸೌರಶಕ್ತಿ, ಮಳೆ ನೀರು ಸಂಗ್ರಹ, ಅಂತರ್ಜಲ ನಿರ್ವಹಣೆ, ಪವನ ಶಕ್ತಿಯಿಂದ ವಿದ್ಯುತ್, ಜಲ ವಿದ್ಯುತ್ ಯೋಜನೆಗಳ ಮಾದರಿ, ಪರಿಸರ ಮಾಲಿನ್ಯ, ಶಕ್ತಿಯ ರೂಪಾಂತರ, ವೇಗ ನಿಯಂತ್ರಕ ರಸ್ತೆ ಉಬ್ಬಿನಿಂದ ವಿದ್ಯುತ್, ಚಲನೆಯ ಮಾದರಿಗಳು, ಚಂದ್ರ ಮತ್ತು ಸೂರ್ಯ ಗ್ರಹಣ, ನೀರಿನ ಮಟ್ಟ ಸೂಚ್ಯಂಕ ಪ್ರಮುಖವಾದವು.

Thursday 1 August 2013

ಸಿಹಿ ಸಿಹಿ ಹಾಲು ಸವಿಯೋಣ ; 'ಕ್ಷೀರ ಭಾಗ್ಯ' ಯೋಜನೆ ಉದ್ಘಾಟನೆ

ಇಂದು ಎಂದಿನಂತಿರಲಿಲ್ಲ.. ಬೆಳಗ್ಗೆಯಿಂದ ನಮ್ಮೆಲ್ಲಾ ಶಿಕ್ಷಕರ ಫೋನುಗಳು ರಿಂಗಣಿಸುತ್ತಿದ್ದವು. ಆಕಡೆಯಿಂದ  ಒಂದೇ ಪ್ರಶ್ನೆ, "ಸರ್ ಇನ್ನು ಶಾಲೆಗೆ ಬಂದಿಲ್ವಾ..?" ನಾನಂತೂ ಆಗಾಗ ನನ್ನ ವಾಚ್ ನ್ನು ನೋಡಿಕೊಳ್ಳುತ್ತಿದ್ದೆ. ನಮ್ಮ ಶಾಲಾ ವಿದ್ಯಾರ್ಥಿಗಳು ಒಂದೇ ಸಮನೆ ಫೊನು ಮಾಡಿ ವಿಚಾರಿಸುತ್ತಿದ್ದುದು ಇಂದು ವಿತರಿಸಬೇಕಾಗಿದ್ದ ಹಾಲಿನ ಬಗ್ಗೆ. ಅವರಿಗೆ ಹಾಲು ಸವಿಯುವ ಕಾತುರ.. ನಮಗೋ ಒಂಥರ ಆತುರ..

  ಬೆಳಗ್ಗೆ ಸರಿಯಾಗಿ 8.30ಕ್ಕೆ ನಮ್ಮ ಮುಖ್ಯಗುರುಗಳು ಹಾಗೂ ನಾವೆಲ್ಲಾ ಸಹಶಿಕ್ಷಕರು ನಿನ್ನೆ  ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ್ದ ಹಾಲಿನ ಪುಡಿ, ಸಕ್ಕರೆ ಸಾಮಗ್ರಿಗಳನ್ನ ಹೊತ್ತು ಶಾಲೆಗೆ ಬಂದೆವು. ಬಳಿಕ ಕ್ಷಿರ ಭಾಗ್ಯ ಯೋಜನೆಯ ಉದ್ಘಾಟನೆಗೆ ರೆಡಿ ಮಾಡಿ ಗ್ರಾಮದ ಪ್ರಮುಖರನ್ನು, ಎಸ್.ಡಿ.ಎಮ್.ಸಿ ಯವರನ್ನು ಕರೆಯಿಸಿ ಸನ್ನದ್ಧರಾದೆವು. ಮುಖ್ಯಅಡುಗೆಯವರಾದ ಶ್ರೀಮತಿ ಮಕಲಮ್ಮ ಗೌಡತಿ, ಶ್ರೀಮತಿ ನಾಗಮ್ಮ ಹಾಗೂ ಶ್ರೀಮತಿ ಶಾಣಮ್ಮ ಅವರು ಆವು ಈಡಿದ್ದ ಹಾಲಿನ ಪುಡಿ ಹಾಗು ಸಕ್ಕರೆ ಬಳಸಿ ಹಾಲು ತಯಾರಿಸಿದರು.

                              9.10 ರ ಸುಮಾರಿಗೆ ಕ್ಷೀರ ಭಾಗ್ಯ ಯೋಜನೆಯನ್ನು ಶಾಲೆಯ ಮುಖ್ಯ ಗುರುಗಳಾದ ಶ್ರೀ ಹರಿಶ್ಚಂದ್ರ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಮಾನಪ್ಪ ಪೂಜಾರಿ, ಶ್ರೀ ಮಹಾದೇವಪ್ಪ ದೇಸಾಯಿ, ಶ್ರೀ. ನಿಂಗಣ್ಣಗೌಡ ಮಾಲಿಪಾಟೀಲ, ಶ್ರೀ ನಿಂಗಣ್ಣ ಕವಾಲ್ದಾರ,  ಶ್ರೀ. ಶಿವಪ್ಪ, ಶ್ರೀ ಲಕ್ಷ್ಮಣ, ಬಸವಂತರಾಯ ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆಯಾದ ಶ್ರೀಮತಿ ಬಸಮ್ಮ. ಸಕ್ರೆಪ್ಪ ,ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರಿ ಸಪ್ಪಣ್ಣ ಭೀಮರಾಯ ಹಾಗೂ ಸದಸ್ಯರು ಶಿಕ್ಷಕರು ಹಾಗೂ ಮುದ್ದು ವಿದ್ಯಾರ್ಥಿಗಳು ಭಾಗವಹಿಸಿದ್ದರು.

     ಸಹ ಶಿಕ್ಷಕರಾದ ಶ್ರೀ ಸಚಿನ್ ಕುಮಾರ ಹಿರೇಮಠ ಅವರು ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಮುಖ್ಯೋಪಾದ್ಯಾಯರು ಹಾಗೂ ಎಲ್ಲ ಅತಿಥಿ ಗಣ್ಯರು 'ಕ್ಷೀರ ಭಾಗ್ಯ' ಯೋಜನೆಯನ್ನು ಉದ್ಘಾಟಿಸಿದರು. ಬಳಿಕ ಶ್ರೀ ಮಂಜುನಾಥ ಸ.ಶಿ ಮಾತನಾಡಿ ಯೋಜನೆಯ ಮಹತ್ವವನ್ನು ತಿಳಿಸಿದರು. ಆಮೇಲೆ ಶ್ರೀ ಗೋಣೆಪ್ಪ ಸ.ಶಿ ಇವರು ಮಾತನಾಡಿ ಯೋಜನೆಯ ಅನುಷ್ಠಾನದ ಕುರಿತು ವಿವರಿಸಿದರು. ಗ್ರಾಮದ ಮತ್ತೋರ್ವ ಶಿಕ್ಷಕರಾದ ಶ್ರೀ ಲಕ್ಷ್ಮಣ ಅವರೂ ಸಹ ಮಾತನಾಡಿ ಯೋಜನೆನ್ನು ಶ್ಲಾಘಿಸಿದರು.
     ಬಳಿಕ  ಎಲ್ಲ ವಿದ್ಯಾರ್ಥಿಗಳಿಗೆ ಅಡುಗೆ ಸಹಾಯಕಿಯರು ಹಾಲು ಹಂಚಿದರು. ಹಾಲು ಕುಡಿದ ವಿದ್ಯಾರ್ಥಿಗಳ ಸಂತಸ ಹೇಳತೀರದು. ಅದಕ್ಕೆ ಸಾಕ್ಷಿಯಾಗಿ ಇಲ್ಲೊಂದಿಷ್ಟು ಪೋಟೊಗಳು..