Sunday 10 July 2011

ಅಕ್ಕರೆಯ ಗುರುಗಳಿಗೆ ಸಕ್ಕರೆಯ ಬಿಳ್ಕೊಡುಗೆ..

 ಮುಖ್ಸಗುರುಗಳಿಂದ ಸನ್ಮಾನಿತರಾಗುತ್ತಿರುವ ಶ್ರೀ ಗುಂಡಪ್ಪ ಸರ್
ವತ್ತಿನ ದಿನ ನಮ್ಮ ಕೊಡಚಿ ಶಾಲೆಯ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ, ಶಿಕ್ಷಕರುಗಳಿಗೆ ದುಃಖದಾಯಕವಾದ ದಿನ. ಕಾರಣ ನಮ್ಮೆಲ್ಲರ ಅಕ್ಕರೆಯ ಶಿಕ್ಷರಾದ ಶ್ರಿ ಗುಂಡಪ್ಪಅವರಿಗೆ ಸಕ್ಕರೆಯ ಬೀಳ್ಕೊಡುಗೆ. 2010-11ನೇ ಸಾಲಿನ ಶಿಕ್ಷಕರ ವರ್ಗಾವಣೆಯಲ್ಲಿ ಸಮೀಪದ ಸ.ಮಾ.ಹಿ.ಪ್ರಾ.ಶಾಲೆ ಆಂದೋಲಾಗೆ ವರ್ಗಾವಣೆಯಾಗಿರುವ ಅವರದು ಅಂದು ನಮ್ಮ ಶಾಲೆಯಲ್ಲಿ ಕೊನೆಯ ಸೇವೆಯ ದಿನ.
 02-08-2002ರಂದು ಸೇವೆಗೆ ಸೇರಿದ ಶ್ರೀ ಗುಂಡಪ್ಪ ಅವರದು ಒಂಬತ್ತು ವರ್ಷಗಳ ಪ್ರಾಮಾಣಿಕ ಸೇವೆ. ಯಾರೇನೆ ಅಂದರು ಎಲ್ಲವನ್ನು ಕ್ಷಮಾಗುಣದಿಂದ ಪರಿಭಾವಿಸುವ ಪ್ರವೃತ್ತಿ. ಪ್ರಾಥಮಿಕ ಹಂತದ ಮಕ್ಕಳಿಗಂತೂ ಗುಂಡಪ್ಪ ಸರ್ ಅಂದರೆ ಪಂಚಪ್ರಾಣ. ಅವರು ರಜೆಯ ಮೇಲಿದ್ದರಂತೂ ಅವರನ್ನು ವಿಚಾರಿಸದ ಮಕ್ಕಳೇ ಇಲ್ಲ..
ಪಾಠ- ಪ್ರವಚನಗಳೂ ಅಷ್ಟೇ, ಮಕ್ಕಳ ಮಟ್ಟಕ್ಕಿಳಿದು ಮಕ್ಕಳಂತಾಗಿ ಕಲಿಸುವ ಅವರ ಕಲಿಕಾ ಚಟುವಟಿಕೆಗಳು ತೀರಾ ಸುಲಭ. ಸರಳ ಮತ್ತು ಅಷ್ಟೇ ಸಂತಸದಾಯಕವಾಗಿದ್ದವು. 40ರ ಆಸುಪಾಸಿನಲ್ಲಿದ್ದರೂ ಅವರ ಉತ್ಸಾಹದ ಚಿಲುಮೆಗೆ ಬರವಿಲ್ಲ. ಹೊಸದಾಗಿ ಬಂದ ನಾವು ಕೆಲವೊಂದು ಸಲ ಬೇಸರಿಸಿಕೊಂಡರೂ ಗುಂಡಪ್ಪ ಅವರಂತು ಒಂದಿಷ್ಟೂ ಬೇಸರಿಸಿಕೊಳ್ಳದೇ ನಮಗೆ ಸ್ಫೂರ್ತಿ ನೀಡುತ್ತಿದ್ದರು. ಈ ಎಂಟು ವರ್ಷಗಳ ಅವರಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳು ಅವಿಸ್ಮರಣೀಯ.ಅವರದು ಆಮೆಗತಿಯಾದರೂ ಫಲಿತಾಂಶ ಮಾತ್ರ ನಿಖರ ಮತ್ತು ವೇಗದ್ದು.
ಆದರೆ ಅಂದು ಅಲ್ಲಿ ನೆರೆದಿದ್ದವರ ಕಣ್ಣಾಲಿಗಳಲ್ಲಿ ಕಂಬನಿಗಳ ಮತ್ತು ಶುಭಾಶಯಗಳ ಹೊರತು ಏನೇನೂ ಇರಲಿಲ್ಲ. ಅಕ್ಕರೆಯ ಗುಂಡಪ್ಪ ಸರ್ ಗೆ ನಮ್ಮ ಕೊಡಚಿ ಶಾಲೆಯಿಂದ ಸಕ್ಕರೆಯ ಬೀಳ್ಕೊಡುಗೆ.. ನಿಮಗೆ ಶುಭವಾಗಲಿ..

    ---ಸಚಿನ್ ಕುಮಾರ ಬಿ.ಹಿರೇಮಠ

No comments:

Post a Comment