Monday, 26 January 2015

66ನೆಯ ಗಣತಂತ್ರ ದಿನಾಚರಣೆ

ಇಂದು 66ನೆಯ ಗಣತಂತ್ರ ದಿನವನ್ನು ನಮ್ಮ ಕೊಡಚಿ ಶಾಲೆಯಲ್ಲಿ ಆಚರಿಸಲಾಯಿತು. ಮುಖ್ಯಗುರುಗಳಾದ ಶ್ರೀ ಹರಿಶ್ಚಂದ್ರ ಧ್ವಜಾರೋಹಣ ನೆರವೇರಿಸಿದರು. ಗ್ರಾಮದ ಕನಕದಾಸ ಗ್ರಾಮೀಣ ಯುವ ಬಳಗ ಮಕ್ಕಳಿಗೆ ನೋಟ್ ಪುಸ್ತಕ ಪೆನ್ನು ವಿತರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು

Thursday, 22 January 2015

ಸಿಂಚನ ; ಒಂದು ವಿನೂತನ ತರಬೇತಿ

ಹಿರಿಯ ಪ್ರಾಥಮಿಕ ಶಾಲೆಯ 6 ರಿಂದ 8 ನೆಯ ತರಗತಿಗಳ ಗಣಿತ ಬೋಧಿಸುವ ಶಿಕ್ಷಕರಿಗೆ ಐದು
ದಿನಗಳ ತರಬೇತಿ ಜೇವರ್ಗಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಿಂಚನ ತರಬೇತಿ
ನಡೆಯಿತು. ತರಬೇತಿಯಲ್ಲಿ ಗಣಿತ ವಿಷಯದಲ್ಲಿನ ಪರಿಕಲ್ಪನೆಗಳನ್ನು ವಿಶಿಷ್ಟ ರೀತಿಯಲ್ಲಿ
ತಿಳಿಸಲಾಯಿತು. ಯಾವುದೇ ಬೀಜಾಕ್ಷರದ ಘಾತ ಸೊನ್ನೆ ಇದ್ದಾಗ ಬೆಲೆ ಒಂದು ಹೇಗೆ?
ಎಂಬುದನ್ನು ಬೇರೆ ಬೇರೆ ವಿಧಾನಗಳಿಂದ ತಿಳಿಸಿದರು. ಗಣಿತ ವಿಷಯದಲ್ಲಿ ಪಾಠ ಯೋಜನೆ,
ಅದರ ವ್ಯಾಪ್ತಿ, ತೊಟಡಗಿಸಿಕೊಳ್ಳುವಿಕೆ, ಶೋಧಿಸುವಿಕೆ, ಅಭಿವ್ಯಕ್ತಿಸುವಿಕೆ,
ಅನ್ವಯಿಸುವಿಕೆ,ಮೌಲ್ಯಮಾಪನ ಹೀಗೆ ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕೆಂದು ಸಂಪನ್ಮೂಲ
ವ್ಯಕ್ತಿಗಳು ವಿಶಿಷ್ಟವಾಗಿ ವಿವರಿಸಿದರು.
ಶಿಬಿರಾರ್ಥಿಗಳನ್ನು ತಂಡಗಳಾಗಿ ಮಾಡಿ ಪ್ರತಿ ತಂಡಕ್ಕೂ ಒಂದು ಘಟಕ ನೀಡಿ ಪಾಠ ಮಂಡನೆ
ಮಾಡಲು ತಿಳಿಸಲಾಯಿತು. ಎಲ್ಲ ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡಿದ್ದು
ವಿಶೇಷವಾಗಿತ್ತು.

Wednesday, 21 January 2015

ಶಕ್ತಿ ; ತರಗತಿಯಲ್ಲೊಂದಿಷ್ಟು...

ಅಂದು ತರಗತಿಯಲ್ಲಿ ತೀರಾ ಗದ್ದಲ. ನನ್ನ ಕೈಯಲ್ಲಿದ್ದ ಕೋಲು ಹಾಗೂ ಕ್ಯಾರಿ ಬ್ಯಾಗ್
ನೋಡಿ ವಿದ್ಯಾರ್ಥಿಗಳು ಕ್ಷಣ ಕಾಲ ಭಯಭೀತರಾದರು. ಹೋಂ ವರ್ಕ್ ಮಾಡದವರಿಗೆ ಇದೆ ಹಬ್ಬ
ಅಂತ ಅವರು ತಿಳಿದರೇನೋ? ಒಟ್ಟಿನಲ್ಲಿ ತರಗತಿ ನಿಶ್ಶಬ್ದವಾಯಿತು. ಎಲ್ಲರಿಗೂ ಹಾಯ್
ಹೇಳಿ ನಾನು ತಂದಿದ್ದ ಕೋಲನ್ನು ಒಬ್ಬ ವಿದ್ಯಾರ್ಥಿಗೆ ಮುರಿಯಲು ತಿಳಿಸಿದೆ.ಆತ
ತನ್ನೆಲ್ಲ ಶಕ್ತಿ ಹಾಕಿ ಆ ಕೋಲನ್ನ ಮುರಿದೇಬಿಟ್ಟ,
ಮುಂದೆ ನಾನು ತಂದಿದ್ದ ಕ್ಯಾರಿ ಬ್ಯಾಗ್ ನಿಂದ ಒಂದು ನೀರು ತುಂಬಿದ ವಾಟರ್ ಬಾಟಲ್
ತೆಗೆದು ತರಗತಿ ಎದುರಿನ ಮಣ್ಣಿಗೆ ಎರಚಿದೆ, ಹೀಗೆ ವಿವಿಧ ಶಕ್ತಿಯ ರೂಪಗಳನ್ನು ಸರಳ
ಚಟುವಟಿಕೆಗಳ ಮೂಲಕ ಅನುಗಮನ ವಿಧಾನದಿಂದ ಪರಿಚಯಿಸುತ್ತ ಹೋದೆ. ನನ್ನ
ವಿದ್ಯಾರ್ಥಿಗಳಿಗೆ ನಾನು ಕಲಿಸಿದೆ ಎನ್ನುವುದಕ್ಕಿಂತ ಅವರೇ ಪೂರಕವಾಗಿ ಕಲಿಯುತ್ತಾ
ಹೋದರು. ಪ್ಯಾಯೋಗಿಕ ಬೋಧನೆಯೊಂದಿಗೆ ಪ್ರಾತ್ಯಕ್ಷಿಕೆ ನೀಡಿದರೆ ಸುಳಿದ ಬಾಳೆಹಣ್ಣಂತೆ
ಎಲ್ಲವನ್ನೂ ಚಿಣ್ಣರು ಕಲಿಯಬಲ್ಲರು

Saturday, 10 January 2015

ನೋಡಿ ತಿಳಿ : ಮಾಡಿ ಕಲಿ

ಅಂದು ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆ ಬೆಳಕು ಪಾಠದಲ್ಲಿ ಬರುವ ಪೀನ ಮಸೂರದಲ್ಲಿನ ಲಕ್ಷಣಗಳನ್ನು ತಿಳಿಸಿದ ಮೇಲೆ ಕೆಲವು ವಿದ್ಯಾರ್ಥಿಗಳು ತಾವೂ ಸ್ವತಃ ಪ್ರಯೋಗ ಮಾಡಿ ನೋಡುತ್ತೇವೆಂದರು. ಪ್ರಯೋಗ ಸಂಪೂರ್ಣ ಅವರಿಂದಲೇ ನಡೆಯಿತು, ಅವರ ಖುಷಿ ಹೇಳತೀರದು

ಬೆಳಕು: ಪ್ರಾಯೋಗ��ಕ ಕಲಿಕೆ

7ನೆಯ ತರಗತಿ ವಿಜ್ಞಾನ ಬೋಧನೆಯಲ್ಲಿ ಪೀನ ಮಸೂರದಲ್ಲಿ ಉಂಟಾಗುವ ಪ್ರತಿಬಿಂಬದ ಲಕ್ಷಣಗಳನ್ನು ಪ್ರಯೋಗದ ಮೂಲಕ ತಿಳಿಸಲಾಯಿತು

'ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ' ಸಮಾರಂಭ : 09-01-2015

ಇಂದು ದಿನಾಂಕ 09-01-2015ರಂದು ನಮ್ಮ ಕೊಡಚಿ ಶಾಲೆಯಲ್ಲಿ 'ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ' ಸಮಾರಂಭ ವನ್ನು ಹಮ್ಮಿಕೊಳ್ಳಲಾಗಿತ್ತು.   ಸಮಾರಂಭವನ್ನು ಯಾಳವಾರ ಗ್ರಾಮ ಪಂಚಾಯತಿಯ ಅಧ್ಯಕ್ಷರ ಪರವಾಗಿ ಶ್ರೀ ಮಾನಪ್ಪ ಅವರು, ಕಾರ್ಯದರ್ಶಿಗಳಾದ ಶ್ರೀ ಕಾಸಯ್ಯಅವರು ಹಾಗೂ ಇಜೇರಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅಯ್ಯಣ್ಣ ದೇಸಾಯಿ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಶ್ರೀ ಮಾನಪ್ಪ್ ಪೂಜಾರಿ, ಶ್ರೀ ಯಲ್ಲಪ್ಪಗೌಡ ಮಾಲಿ ಪಾಟೀಲ್, ಎಸ್.ಡಿ.ಎಂ.ಸಿ ಅದ್ಯಕ್ಷರಾದ ಶ್ರೀ ಮರೆಪ್ಪ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಉರ್ದು) ಯಾಳವಾರದ ಮುಖ್ಯಗುರುಗಳಾದ ಶ್ರೀ ಅಫ್ಸರ್ ಮಿಯಾ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೀಗರಥಹಳ್ಳಿಉ ಮುಖ್ಯಗುರುಗಳಾದ ಶ್ರೀ ಇಬ್ರಾಹಿಮ್ ಹಾಗೂ ಗ್ರಾಮದ ವಿವಿಧ ಸಂಘದ ಪದಾಧಿಕಾರಿಗಳು,ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಸಕ್ತರು ಭಾಗವಹಿಸಿದ್ದರು. ಶಿಕ್ಷಕರಾದ ಶ್ರೀ ಮಂಜುನಾಥ ಎಸ್.ಜೆ ಅವರು ಕಾರ್ಯಕ್ರಮ ನಿರೂಪಿಸಿ ಎಲ್ಲರಿಗೆ ಸ್ವಾಗತ ಕೋರಿದರು. ಶಿಕ್ಷಕರಾದ ಶ್ರೀ ಸಚಿನ್ ಕುಮಾರ ಹಿರೇಮಠ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ.ಸಂ.ವ್ಯಕ್ತಿಗಳಾದ ಶ್ರೀ ಅಯ್ಯಣ್ಣ ದೇಸಾಯಿಯವರು ಸಭೆಯ ಗುರಿ ಮತ್ತು ಉದ್ಧೇಶಗಳನ್ನು ವಿವರಿಸಿದರು. ಬಳಿಕ ಎಲ್ಲ ಭಾಗೀದಾರರನ್ನು 4 ಗುಂಪುಗಳನ್ನು ಮಾಡಿ ಶಾಲೆಯಲ್ಲಿರುವ ಸೌಲಭ್ಯಗಳು ಹಾಗೂ ಅವಶ್ಯಕ ಸೌಲಭ್ಯಗಳ ಕುರಿತು ಚರ್ಚಿಸಲಾಯಿತು. ಶ್ರೀ ಯಲ್ಲಪ್ಪ ಗೌಡರು ಹಾಗೂ ಶ್ರೀ ಚಾಂದ್ ಪಾಶಾ ಅವರು ಶಾಲೆಗೆ ಕ್ರಮವಾಗಿ 100 ಪ್ಲೇಟ್ಗಳನ್ನು ಹಾಗೂ 100 ಲೋಟಗಳನ್ನು ದಾನವಾಗಿ ನೀಡುವುದಾಗಿ ತಿಳಿಸಿದರು. ಗ್ರಾ.ಪಂ ಕಾರ್ಯದರ್ಶಿಗಳು ಶಾಲೆಗೆ ಒಂದು ಕಂಪ್ಯೂಟರ್ ನೀಡುವುದಾಗಿ ಒಪ್ಪಿಕೊಂಡರು.



Friday, 31 October 2014

ರಾಷ್ಟ್ರೀಯ ಏಕತಾ ದಿವಸ ಆಚರಣೆ

ಇಂದು ದಿ.೩೧.೧೦.೨೦೧೪ ರಂದು ನಮ್ಮ ಕೊಡಚಿ ಶಾಲೆಯಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ರ ಜನ್ಮದಿನ ಅಂಗವಾಗಿ 'ರಾಷ್ಟ್ರೀಯ ಏಕತಾ ದಿವಸ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸರ್ದಾರ್ ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಆದರ್ಶಗಳನ್ನು ಹಾಗೂ ಅವರು ಏಕತೆಗಾಗಿ ನಡೆಸಿದ ಹೋರಾಟವನ್ನು ವಿದ್ಯಾರ್ಥಗಳಿಗೆ ತಿಳಿಸಲಾಯಿತು. ನಂತರ ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು .
  ಈ ಆಚರಣೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು,  ಎಲ್ಲ ಸಹ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು  ಹಾಜರಿದ್ದರು.

Monday, 13 October 2014

ಯೋಜನಾ ಕಾರ್ಯಗಳು ; ಒಂದು ಪೂರಕ ಕಲಿಕೆ

ವಿಜ್ಞಾನ ಕಲಿಕೆಗೆ ನಿರರ್ಗಳ ಬೋಧನಿಯೊಂದೆ ಸಾಕಾಗುವುದಿಲ್ಲ. ಶಿಕ್ಷಕರ ಜ್ಞಾನ, ಸಮರ್ಪಣೆ ಜೊತೆಗೆ ಯೋಜನಾ ಕಾರ್ಯಗಳು ಮಹತ್ತರ ಪಾತ್ರವಹಿಸುತ್ತವೆ. ಇದರಿಂದ ವಿದ್ಯಾರ್ಥಿಗಳು ಸ್ವತಃ ಕಲಿಯುವುದರಿಂದ ಕಲಿಕೆ ಬಲಗೊಳ್ಳುವುದಲ್ಲದೆ ಉತ್ಸಾಹದಿಂದ ಕಾರ್ಯ ಪ್ರವೃಟಿಟರಾಗುವೌತೆ ಮಾಡುತ್ತದೆ.
ಯೋಜನಾ ಕಾರ್ಯಗಳ ಪ್ರಾಮುಖ್ಯತೆ:
1. ವಿದ್ಯಾರ್ಥಿಗಳ ಗಮನ ಹಾಗೂ ಏಕಾಗ್ರತೆಯನ್ನು ಹಿಡಿದಿಡುತ್ತವೆ.
2. ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುತ್ತವೆ.
3. ವೈಜ್ಞಾನಿಕ ಚಿಂತನೆ ಬೆಳೆಸುತ್ತವೆ.
4. ಗುಂಪಿನಲ್ಲಿ ಮಾಡುವ ಚಟುವಟಿಕೆಗಳು ಸಹಕಾರ ಗುಣವನ್ನು ಬೆಳೆಸುತ್ತವೆ.
5. ತರಗತಿಯಾಚೆಗೂ ಕಲಿಕೆಯನ್ನು ಪ್ರೇರೇಪಿಸುತ್ತವೆ.

ಶಿಕ್ಷಕರು ಏನೇನು ಮಾಡಬಹುದು?
ಶಿಕ್ಷಕರು ಯೋಜನಾ ಕಾರ್ಯಗಳಲ್ಲಿ ಕೇವಲ ಅನುಕೂಲಿಗಳಾಗಿ ಮಾರ್ಗದರ್ಶನ ನೀಡಬೇಕು. ಆದರೂ ವಿದ್ಯಾರ್ಥಿಗಳಿಗೆ ಹೊಸ ಕಲಿಕೆಗೆ ಅಥವಾ ಸಂಶೋಧನೆಗೆ ಎಡೆ ಮಾಡಿಕೊಡುವಂತ  ವಿಷಯಗಳನ್ನು ನೀಡಬೇಕು.
ತೀರಾ ಅಪಾಯಕಾರಿಯಾದ ಅಥವಾ ಕಷ್ಟಕರವಾದ ವಿಷಯಗಳನ್ನು ನೀಡದೆ ಸುಲಭವಾಗಿ ಹಾಗೂ ಸ್ಪಷ್ಟವಾಗಿರುವ ವಿಷಯಗಳನ್ನು ನೀಡಬೇಕು.

ಪ್ರದರ್ಶನ:
ಯೋಜನಾ ಕಾರ್ಯಗಳು ಕೇವಲ ದಾಖಲೆಗಳಾಗಿ ಮಾತ್ರವಾಗದೆ ಅವು ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಕನ್ನಡಿಯಾಗಿರಬೇಕು. ಪೋಷಕರಿಗೂ ಪ್ರದರ್ಶನ ಮಾಡುವುದರಿಂದ ಉಳಿದವರಿಗೂ ಸ್ಫೂರ್ತಿಯಾಗುತ್ತದಿ.

ಒಟ್ಟಿನಲ್ಲಿ ಕಲಿಕೆಯ ಜೊತೆಗೆ ಪೂರಕ ಕಾರ್ಯಗಳು ಕಲಿಕೆಯನ್ನು ಉತ್ತೇಜಿಸುತ್ತವೆ.

--ಸಚಿನ್ ಕುಮಾರ