Friday 11 December 2015

ಫ್ಲ್ಯಾನೆಲ್ ಬೋರ್ಡ್ ನಿರ್ವಹಣೆಯ ಉಪಯೋಗಗಳು

'ತರಗತಿಗೊಂದು ಫ್ಲ್ಯಾನೆಲ್ ಬೋರ್ಡ್' ಇದು ಪ್ರತಿಯೊಂದು ಶಾಲೆಗಳಲ್ಲಿ ಕಡ್ಡಾಯವಾಗಿ
ಇರಲೇಬೇಕಾದ ಪರಿಕರ. ವಿದ್ಯಾರ್ಥಿಗಳು ಕಲಿಕೆಯಿಂದ ಪ್ರೇರಿತರಾಗಿ ತಂಮ ಭಾಷಾ
ಕೌಶಲಗಳನ್ನು ಹಾಗೂ ಇತರ ಯಾವುದೇ ಸೃಜನಾತ್ಮಕ ಅಭಿವ್ಯಕ್ತಿಗಾಗಿ ಇದೊಂದು ಪುಟ್ಟ
ವೇದಿಕೆ.
ನಂಮ ಕೊಡಚಿ ಶಾಲೆಯಲ್ಲಿ ಈ ಫ್ಲ್ಯಾನೆಲ್ ಬೋರ್ಡ್ ಈ ರೀತಿಯಾಗಿ ಬಳಕೆಯಲ್ಲಿದೆ.
1. ಮಕ್ಕಳು ಪ್ರತಿದಿನ ಒಂದೊಂದು ಕತೆ,ಕವನ(ಸ್ವರಚಿತ/ಸಂಗ್ರಹ) ಹಾಗೂ ಇತರೆ
ಮಾಹಿತಿಯನ್ನು ಕೈಬರಹದ ಮೂಲಕ ಬರೆದು ಬೋರ್ಡಿಗೆ ಲಗತ್ತಿಸುತ್ತಾರೆ.
2. ಪ್ರತಿ ವಾರಕ್ಕೆ ಎಲ್ಲ ಬರಹಗಳಲ್ಲಿ ಉತ್ತಮವಾದುದನ್ನು ಆಯ್ದು ಗೋಡೆ ಪತ್ರಿಕೆ
ತಯಾರಿಸಲಾಗುತ್ತಿದೆ.
3. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೂ ಉತ್ತೇಜಿಸಲಾಗುತ್ತಿದೆ.
ಫ್ಲ್ಯಾನೆಲ್ ಬೋರ್ಡ್ ಬಳಕೆಯ ಉಪಯೋಗಗಳು:
ವಿದ್ಯಾರ್ಥಿಗಳು ವಿಷಯ ಸಂಗ್ರಹಣೆಗಾಗಿ ಹೆಚ್ಚಿನ ಓದಿನ ಕಡೆ ಗಮನ ಕೊಡುತ್ತಾರೆ.
ಸಾಹಿತ್ಯಿಕ ಹಾಗೂ ವೈಜ್ಞಾನಿಕ ಮನೋಭಾವ ಹೊಂದುತ್ತಾರೆ.
ಪ್ರಯತ್ನಶೀಲತೆ ಹಾಗೂ ಸಂಶೋಧನಾ ಮನೋಭಾವ ಹೊಂದುತ್ತಾರೆ.
ವಿಷಯ ಸಂಗ್ರಹಣೆ,ಓದು ಹಾಗೂ ಬರವಣಿಗೆಯಿಂದಾಗಿ ಅನುರೂಪ ಕಲಿಕಯುಂಟಾಗುತ್ತದೆ.
ಇಷ್ಟೆಲ್ಲ ಅನೂಕೂಲಗಳು ಈ ಪುಟ್ಟ ಪರಿಕರದಿಂದ ಸಾಧ್ಯ ಎಂದಾದಲ್ಲಿ ತಡ ಏಕೆ?
ಇವತ್ತೇ ಫ್ಲ್ಯಾನೆಲ್ ಬೋರ್ಡ್ ಸಜ್ಜುಗೊಳಿಸಿ

Friday 4 December 2015

ಪಡೆಯೋಣ ತರಬೇತಿ ; ಕಲಿಯೋಣ ಸಂಸ್ಕೃತಿ

--- ಸಚಿನ್ ಕುಮಾರ ಬ.ಹಿರೇಮಠ


ಒಂದು ದೇಶದ ಸಂಪನ್ಮೂಲಗಳಲ್ಲಿ ಆ
ದೇಶದ ಕಲೆ ಮತ್ತು ಸಂಸ್ಕೃತಿಯೂ
ಒಂದು. ನಮ್ಮ ದೇಶದಲ್ಲಿ
ವಿಭಿನ್ನ ಪ್ರದೇಶಕ್ಕನುಗುಣವಾಗಿ
ವಿಭಿನ್ನ ಹಾಗೂ ಅಪರೂಪವೆನಿಸುವ ಕಲೆ
ಮತ್ತು ಸಂಸ್ಕೃತಿಗಳು
ನಮಗೆ ಸಿಗುತ್ತವೆ. ವಿವಿಧತೆಯಲ್ಲಿ
ಏಕತೆಯನ್ನು ಸಾಧಿಸುವ ನಮ್ಮ ದೇಶ
ತನ್ನೆಲ್ಲ ಕಲೆ ಮತ್ತು
ಸಂಸ್ಕೃತಿಗಳನ್ನು ಹೆತ್ತ ತಾಯಿಯಂತೆ
ಒಂದೇ ಸಮನಾಗಿ ಕಾಣುತ್ತದೆ.
ವಿಶಾಲವಾಗಿರುವ ತನ್ನೆಲ್ಲ
ಪ್ರದೇಶಗಳನ್ನು, ಆ ಭಾಗದ ವಿವಿಧ
ಕಲೆಗಳನ್ನು ಹಾಗೂ ಅಲ್ಲಿನ
ಮನೋಜ್ಞ ಸಂಸ್ಕೃತಿಯನ್ನು
ಶಿಕ್ಷಣದೊಂದಿಗೆ ಮೇಳೈಸಿ ಪರಸ್ಪರ
ಪರಿಚಯಿಸಲು ಕೇಂದ್ರ ಸರ್ಕಾರದ
ಸಾಂಸ್ಕೃತಿಕ ಮಂತ್ರಾಲಯದ
ಅಂಗ ಸಂಸ್ಥೆಯಾಗಿ 1979ರಿಂದ
ಸಾಂಸ್ಕೃತಿಕ ಸಂಪನ್ಮೂಲ ಮತ್ತು
ತರಬೇತಿ ಕೇಂದ್ರ(Centre For
Cultural Resource and Training)
ನವದೆಹಲಿ ಎಂಬ ಸಂಸ್ಥೆ ಅಹರ್ನಿಶಿ
ಶ್ರಮಿಸುತ್ತಿದೆ.
ಈ ಮೂಲಕ ಶಿಕ್ಷಣದೊಂದಿಗೆ
ಸಂಸ್ಕೃತಿಯನ್ನು ಬೆರೆಸಿ ಭಾರತದ
ಬಗೆಗಿನ ಸಾಂಸ್ಕೃತಿಕ ವೈಭವವನ್ನು
ಪ್ರಶಂಸಿಸಲು ನೆರವಾಗುತ್ತಿದೆ. ಆ
ದೇಶದ ಸಂಸ್ಕೃತಿಯನ್ನು
ತಿಳಿದುಕೊಂಡು ಅದನ್ನು ಪ್ರಸ್ತುತ
ಶೈಕ್ಷಣಿಕ ವ್ಯವಸ್ಥೆಯಲ್ಲಿ
ಅಚ್ಚುಕಟ್ಟಾಗಿ ಅರಿತುಕೊಂಡಾಗ
ಮಾತ್ರ ನಮ್ಮ ದೇಶದ ಸಂಸ್ಕೃತಿಯ
ಸಂರಕ್ಷಣೆ ಸಾಧ್ಯ ಎಂಬುದು ಈ
ಸಿಸಿಆರ್ಟಿ ಆಶಯ.
ಸಾಂಸ್ಕೃತಿಕ ಸಂಪನ್ಮೂಲ ಮತ್ತು
ತರಬೇತಿ ಕೇಂದ್ರದ ಉದ್ದೇಶಗಳು :
- ಶಾಲಾ ಕಾಲೇಜು ವಿದ್ಯಾರ್ಥಿಗಳ
ಮೂಲಕ ಸಂಸ್ಕೃತಿಯ ಪ್ರಸಾರ
- ವರ್ಷವಿಡೀ ಶಾಲಾ ಕಾಲೇಜು
ಶಿಕ್ಷಕರಿಗೆ ವಿವಿಧ
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವುದರ
ಮೂಲಕ ಭಾರತೀಯ ಕಲೆ ಮತ್ತು
ಪರಿಚಯ ಮೂಡಿಸುವುದು.
- ಶಾಲಾ ಪಠ್ಯಕ್ರಮದಂತೆ ಕರಕುಶಲ
ಕಲೆಗಳ ಪ್ರಾಯೋಗಿಕ ಜ್ಞಾನ
ನೀಡುವುದು.
- ವಿವಿಧ ಕಲೆಗಳಾದ ನಾಟಕ, ಸಂಗೀತ,
ರೂಪಕಗಳು, ಶಾಸ್ತ್ರೀಯ ನೃತ್ಯ
ಮುಂತಾದವುಗಳ ಅರಿವು
ಮೂಡಿಸಲು ಕಾರ್ಯಾಗಾರಗಳನ್ನು
ಹಮ್ಮಿಕೊಳ್ಳುವುದು.
- ಭಾರತೀಯ ಸಾಂಸ್ಕೃತಿಕ ಹಾಗೂ
ಪ್ರಾಕೃತಿಕ ಪರಂಪರೆಯ
ಸಂರಕ್ಷಣೆಗಾಗಿ ಶಾಲಾ
ಕಾಲೇಜುಗಳಲ್ಲಿ
ಜಾಗೃತಿ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವುದು.
- ನಗರ ಹಾಗೂ ಗ್ರಾಮೀಣ ಭಾಗದ
ವಿವಿಧ ಕಲೆಗಳ ಹಾಘೂ ಸಂಸ್ಕೃತಿಯ
ಸಂಪನ್ಮೂಲಗಳನ್ನು
ಸಂಗ್ರಹಿಸಿ ಪ್ರಸಾರ ಮಾಡುವುದು.
- 10 ರಿಂದ 14 ವರ್ಷದ ಮಕ್ಕಳಿಗಾಗಿ
ರಾಷ್ಟ್ರೀಯ ಸಾಂಸ್ಕೃತಿಕ
ಪ್ರತಿಭಾನ್ವೇಷಣಾ
ಸ್ಪರ್ಧೆಗಳನ್ನು ಏರ್ಪಡಿಸಿ
ಪ್ರೋತ್ಸಾಹಕಗಳನ್ನು ನೀಡುವುದು.
- ಶಾಲಾ ಕಾಲೇಜುಗಳಲ್ಲಿ
ಸಾಂಸ್ಕೃತಿಕ ಕ್ಲಬ್ ರಚಿಸಿ ಸಾಂಸ್ಕೃತಿಕ
ಶಿಕ್ಷಣವನ್ನು
ಉತ್ತೇಜಿಸುವುದು.
ಯಾರು ಭಾಗವಹಿಸಬಹುದು?
- 50 ವರ್ಷದೊಳಗಿನ ಎಲ್ಲಾ
ಸರ್ಕಾರಿ/ಅರೆಸರ್ಕಾರಿ/ಅನುದಾನಿತ/
ಅನುದಾನರಹಿತ ಪ್ರಾಥಮಿಕ
ಶಾಲಾ ಶಿಕ್ಷಕರು, ಪ್ರೌಢ ಶಾಲಾ
ಶಿಕ್ಷಕರು ಹಾಗೂ ಕಾಲೇಜು
ಉಪನ್ಯಾಸಕರು
- ದೈಹಿಕ ಶಿಕ್ಷಕರು ಹಾಗೂ
ಮುಖ್ಯೋಪಾಧ್ಯಯರು/
ಪ್ರಾಂಶುಪಾಲರನ್ನು ಹೊರತು ಪಡಿಸಿ
ಎಲ್ಲ
ವಿಷಯದ ಶಿಕ್ಷಕರು
ಭಾಗವಹಿಸುವಿಕೆ ಹೇಗೆ?
ಮೇಲಿನ ಕಾರ್ಯಕ್ರಮಗಳಲ್ಲಿ
ಪಾಲ್ಗೊಳ್ಳಲು ಇಚ್ಛಿಸುವ ಶಿಕ್ಷಕರು
ಸಾಂಸ್ಕೃತಿಕ ಸಂಪನ್ಮೂಲ
ಮತ್ತು ತರಬೇತಿ ಕೇಂದ್ರ
ನಿಯೋಜಿಸಿರುವ ರಾಜ್ಯದಲ್ಲಿನ
ಆಯಾ ಜಿಲ್ಲಾ ಸಂಪನ್ಮೂಲ
ವ್ಯಕ್ತಿ(DRP)ಗಳನ್ನು ಸಂಪರ್ಕಿಸಿ
ತಮ್ಮ ಹೆಸರು
ನೋಂದಾಯಿಸಿಕೊಳ್ಳಬೇಕು. ಬಳಿಕ
ಹೀಗೆ
ನೋಂದಾಯಿಸಿಕೊಂಡ ಶಿಕ್ಷಕರುಗಳಿಗೆ
ಜಿಲ್ಲಾ ಮಟ್ಟದ ತರಬೇತಿ
ಆಯೋಜಿಸಲಾಗುತ್ತದೆ. ಆ ತರಬೇತಿ
ಪೂರ್ಣಗೊಳಿಸಿದ ಬಳಿಕ ಸಿ ಸಿ ಆರ್ ಟಿ ವೆಬ್
ಸೈಟಿನಲ್ಲಿ ಆಯಾ ವರ್ಷದ
ಕ್ಯಾಲೆಂಡರ್ ಅವಧಿಗೆ
ವಿವಿಧ ಕಾರ್ಯಾಗಾರಗಳನ್ನು
ಆಯೋಜಿಸಿರುವ ಬಗ್ಗೆ ಮಾಹಿತಿ
ಲಭ್ಯವಿರುತ್ತದೆ. ಅದರ ಪ್ರಕಾರ
ಶಿಕ್ಷಕರು ತಾವು ಇಚ್ಛಿಸುವ
ಕಾರ್ಯಾಗಾರಕ್ಕೆ ತೆರಳುವ ಬಗ್ಗೆ
ಜಿಲ್ಲಾ ಸಂಪನ್ಮೂಲ
ವ್ಯಕ್ತಿ(DRP)ಗಳಿಗೆ ಮನವಿ
ಸಲ್ಲಿಸಬೇಕಾಗುತ್ತದೆ. ಸದರಿ ಜಿಲ್ಲಾ
ಸಂಪನ್ಮೂಲ
ವ್ಯಕ್ತಿ(DRP)ಗಳು ತರಬೇತಿಗೆ
ಆಯ್ಕೆಗೊಂಡ ಶಿಕ್ಷಕರ ಪಟ್ಟಿಯನ್ನು
ಸಾರ್ವಜನಿಕ ಶಿಕ್ಷಣ
ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ
ಕಳಿಸಿ ಅನುಮತಿ ಪಡೆದು
ಕಾರ್ಯಾಗಾರಕ್ಕೆ ಹಾಜರಾಗಲು
ಆದೇಶಪ್ರತಿಯನ್ನು ಆಯ್ಕೆಗೊಂಡ
ಶಿಕ್ಷಕರಿಗೆ ಕಳಿಸುತ್ತಾರೆ. ಬಳಿಕ
ಶಿಕ್ಷಕರು ಮೊದಲು ತಮ್ಮ
ಸ್ವಂತ ಖರ್ಚಿನಲ್ಲಿಯೇ
ಕಾರ್ಯಾಗಾರಕ್ಕೆ ಹಾಜರಾಗಿ ಸೂಕ್ತ
ಪ್ರಯಾಣದ ವಿವರಗಳನ್ನು ಸಲ್ಲಿಸಿ
ದಿನ ಭತ್ಯೆ ಹಾಗೂ ಪ್ರಯಾಣ
ಭತ್ಯೆಯನ್ನು
ಪಡೆದುಕೊಳ್ಳಬಹುದು.ಉಚಿತ ವಸತಿ
ಹಾಗೂ ಊಟೋಪಚಾರ
ವ್ಯವಸ್ಥೆಯಿರುತ್ತದೆ.
ಕಾರ್ಯಾಗಾರದಲ್ಲಿ ಏನೇನಿರುತ್ತದೆ?
ಈ ಮೇಲೆ ತಿಳಿಸಿದಂತೆ
ಕಾರ್ಯಾಗಾರವು ಭಾರತೀಯ ಕಲೆ
ಮತ್ತು ಸಂಸ್ಕೃತಿ
ಕುರಿತಾಗಿರುವುದರಿಂದ ಹೆಚ್ಚಿನ ವಿಷಯ
ಅದರ ಮೇಲೆ
ಕೇಂದ್ರೀಕೃತವಾಗಿರುತ್ತದೆ. ವಿವಿಧ
ರಾಜ್ಯಗಳ ಶಿಕ್ಷಕರುಗಳು
ಕಾರ್ಯಾಗಾರದಲ್ಲಿರುವುದರಿಂದ
ವಿವಿಧ ರಾಜ್ಯಗಳ ಕಲೆಗಳು ಸಂಸ್ಕೃತಿ,
ಭಾಷೆ ಹಾಗೂ ವೈವಿಧ್ಯತೆಯ
ಪರಿಚಯವಾಗುತ್ತದೆ. ಪ್ರತಿ
ರಾಜ್ಯದಿಂದ ಒಂದು ಸಾಂಸ್ಕೃತಿಕ
ಕೊಡುಗೆಯಾಗಿ ಶಿಕ್ಷಕರು
ಯಾವುದಾದರು ಒಂದು ಕಲೆ ಅಥವಾ
ಸಂಸ್ಕೃತಿಯನ್ನು ಪ್ರದರ್ಶನ
ಮಾಡಬೇಕಾಗಿರುತ್ತದೆ. ಕ್ಷೇತ್ರ
ಪ್ರವಾಸ, ಕರಕುಶಲ, ರಂಗಕಲೆ ಹಾಗೂ
ಗೊಂಬೆಯಾಟ(Pupperty)
ಮುಂತಾದವುಗಳ ಪರಿಚಯ ಹಾಗೂ
ಪ್ರಾಯೋಗಿಕ ಅನುಭವವಾಗುತ್ತದೆ.
ಕಾರ್ಯಾಗಾರದ ವಿಷಯಗಳಾವುವು?
ಒಂದು ಕ್ಯಾಲೆಂಡರ್ ವರ್ಷದಲ್ಲಿ ವಿವಿಧ
ಕಾರ್ಯಾಗಾರಗಳು ಈ
ಕೆಳಗಿನಂತಿರುತ್ತವೆ.
- ಭಾರತೀಯ ಸಾಂಸ್ಕೃತಿಕ ಹಾಗೂ
ಪ್ರಾಕೃತಿಕ ಪರಂಪರೆಯ
ಸಂರಕ್ಷಣೆಯಲ್ಲಿ ಶಾಲೆಗಳ ಪಾತ್ರ
- ಶಿಕ್ಷಣದಲ್ಲಿ ಗೊಂಬೆಯಾಟದ
ಪಾತ್ರ
- ಶಾಲಾ ಶಿಕ್ಷಣದಲ್ಲಿ ಸಂಕಲಿತ
ಕರಕುಶಲ ಕಲೆಗಳು
- ನಮ್ಮ ಸಾಂಸ್ಕೃತಿಕ ವೈವಿಧ್ಯತೆ
- ನಾವೀನ್ಯತೆಯ ತರಬೇತಿ
(ಹೈಸ್ಕೂಲ್ ಶಿಕ್ಷಕರು ಮತ್ತು ಜಿಲ್ಲಾ
ಸಂಪನ್ಮೂಲ ವ್ಯಕ್ತಿಗಳಿಗೆ
ಮಾತ್ರ)
- ಶಿಕ್ಷಣದಲ್ಲಿ ರಂಗಕಲೆ
ಕಾರ್ಯಾಗಾರ ಎಲ್ಲೆಲ್ಲಿ
ನಡೆಯುತ್ತವೆ?
ದೇಶದ ವಿವಿಧ ಕಲೆಗಳು ಹಾಗೂ
ಸಾಂಸ್ಕೃತಿಕ ಪರಿಚಯವಾಗಲಿ ಎಂಬ
ಕಾರಣಕ್ಕೆ ಕಾರ್ಯಾಗಾರ ದೇಶದ
ವಿವಿಧ ಭಾಗಗಳಲ್ಲಿ ನಡೆಯುತ್ತವೆ.
ಉತ್ತರ ಭಾಗ : ನವದೆಹಲಿ, ಜಮ್ಮು
ಕಾಶ್ಮೀರ
ದಕ್ಷಿಣ ಭಾಗ : ಹೈದರಾಬಾದ್,
ಮುಂಬಯಿ, ಪುಣೆ, ಚೆನ್ನೈ,ಮೈಸೂರು,
ಬೆಂಗಳೂರು
ಪಶ್ಚಿಮ ಭಾಗ : ಉದಯಪುರ್
ಮಧ್ಯ ಭಾಗ : ಭೋಪಾಲ್
ಪೂರ್ವ ಭಾಗ : ಪಾಟ್ನಾ,
ಕೋಲ್ಕೋತ್ತಾ, ಭುವನೇಶ್ವರ್
ಈಶಾನ್ಯ ಭಾಗ : ಗ್ಯಾಂಗ್ಟೋಕ್,
ಗುವಾಹಟಿ, ಇಟಾನಗರ್, ಐಝ್ವಾಲ್,
ತರಬೇತಿಯ ನಂತರ ಏನು?
ತರಬೇತಿ ಪೂರ್ಣಗೊಳಿಸಿದ ಬಳಿಕ ಅಲ್ಲಿ
ತಿಳಿದುಕೊಂಡ ವಿಷಯವನ್ನು ನಮ್ಮ
ಶಾಲಾ ಹಂತದಲ್ಲಿ
ಅನುಷ್ಠಾನಕ್ಕೆ ತರುವುದು.
ಶಾಲೆಗಳಲ್ಲಿ 'ಸಾಂಸ್ಕೃತಿಕ ಕ್ಲಬ್' ನ್ನು
ರಚಿಸಿ ವಿವಿಧ
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಬಹುದು.ಇದಕ್ಕೆ ಸಿ ಸಿ
ಆರ್ ಟಿ ಯಿಂದ ಅನುದಾನವೂ
ಲಭಿಸುತ್ತದೆ. ಅಲ್ಲದೇ ನಮ್ಮ
ರಾಜ್ಯದ ವಿವಿಧ ಕಲೆ ಹಾಗೂ
ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ
ಸಂಶೋಧನೆ ಕೈಗೊಂಡು ಅದನ್ನು
ದೇಶದೆಲ್ಲೆಡೆ ಪರಿಚಯಿಸಬಹುದು.
ಕಾರ್ಯಾಗಾರದಲ್ಲಿ
ಭಾಗವಹಿಸಿದಾಗ ನಮ್ಮ ದೇಶದ ಕಲೆ
ಮತ್ತು ಸಂಸ್ಕೃತಿಯ ಇಡಿಯಾದ
ಪರಿಚಯವಾಗುವುದರಿಂದ ಉತ್ಸಾಹಿ
ಶಿಕ್ಷಕರು ಭಾಗವಹಿಸುವುದು ಒಳಿತು.
ಸಾಧ್ಯವಾದರೇ ಇಂದಿನಿಂದಲೇ
ನಿಮ್ಮ ಪ್ರಯತ್ನ ಆರಂಭಿಸಿ.
ಸಾಂಸ್ಕೃತಿಕ ಸಂಪನ್ಮೂಲ ಮತ್ತು
ತರಬೇತಿ ಕೇಂದ್ರ ನವದೆಹಲಿ ಸಂಪರ್ಕ
ವಿಳಾಸ :
ಸಾಂಸ್ಕೃತಿಕ ಸಂಪನ್ಮೂಲ ಮತ್ತು
ತರಬೇತಿ ಕೇಂದ್ರ ನವದೆಹಲಿ,
ಸಾಂಸ್ಕೃತಿಕ ಮಂತ್ರಾಲಯ, ಭಾರತ
ಸರ್ಕಾರ
15 –A ಸೆಕ್ಟರ್ -7, ದ್ವಾರಕಾ, ನವದೆಹಲಿ
110075
ದೂರವಾಣಿ : (011)25088638,25309300
ಫ್ಯಾಕ್ಸ್ : (011)25088637
ಇಮೇಲ್ : dir.ccrt@nic.in